ಗ್ರಾ.ಪಂ.ನೌಕರರಿಗೆ ಸರಕಾರದಿಂದಲೇ ವೇತನ: ಸಚಿವ ಎಚ್.ಕೆ.ಪಾಟೀಲ್

Update: 2018-03-02 12:58 GMT

ಬೆಂಗಳೂರು, ಮಾ. 2: ರಾಜ್ಯದ ಗ್ರಾಮ ಪಂಚಾಯತ್ ಎಲ್ಲ ನೌಕರರ ವೇತನವನ್ನು ಸರಕಾರವೇ ಪಾವತಿಸಲು ತೀರ್ಮಾನಿಸಿದ್ದು, ಮಾ.1ರಿಂದಲೇ ನೌಕರರಿಗೆ ವೇತನ ಪಾವತಿ ಆರಂಭಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 6024 ಗ್ರಾ.ಪಂ.ಗಳ 50,114 ಮಂದಿ ನೌಕರರಿಗೆ ಪ್ರಯೋಜನವಾಗಲಿದೆ. ಇದರಿಂದ ರಾಜ್ಯ ಸರಕಾರಕ್ಕೆ ವಾರ್ಷಿಕ 736 ಕೋಟಿ ರೂ. ಹೊರೆಯಾಗಲಿದೆ ಎಂದು ಹೇಳಿದರು.

ನೌಕರರಿಗೆ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ವೇತನ ಪಾವತಿಯಾಗದೆ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವುದನ್ನು ಮನಗಂಡು ರಾಜ್ಯ ಸರಕಾರದಿಂದಲೇ ವೇತನ ಪಾವತಿಸಲು ನಿರ್ಧರಿಸಲಾಗಿದೆ ಎಂದ ಅವರು, ಕುಡಿಯುವ ನೀರು, ನೈರ್ಮಲ್ಯ, ಸಂಪನ್ಮೂಲ ಸಂಗ್ರಹಣೆ, ಕೇಂದ್ರ-ರಾಜ್ಯ ಸರಕಾರಗಳ ಯೋಜನೆಗಳ ಅನುಷ್ಠಾನದಲ್ಲಿ ಗ್ರಾ.ಪಂ.ನೌಕರರ ಪಾತ್ರ ಮಹತ್ವದ್ದು ಎಂದು ಶ್ಲಾಘಿಸಿದರು.

ಗ್ರಾ.ಪಂ.ಪಿಡಿಒ ಹೊರತುಪಡಿಸಿ ಗುಮಾಸ್ತ, ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್, ವಾಟರ್‌ಮೆನ್, ಮೆಕ್ಯಾನಿಕ್, ಸ್ವಚ್ಛತಾಗಾರರಾಗಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಈ ನೂತನ ಸೌಲಭ್ಯ ದೊರೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಗ್ರಾ.ಪಂ.ನೌಕರರಿಗೆ ನಿಗದಿತ ಅವಧಿಯೊಳಗೆ ಕನಿಷ್ಠ ವೇತನ ದೊರಕದೆ ಜೀವನ ನಿರ್ವಹಣೆ ಕಷ್ಟವಾಗಿರುವುದನ್ನು ಅರಿತು ಸರಕಾರದಿಂದಲೇ ವೇತನ ನೀಡಲು ತೀರ್ಮಾನಿಸಿದ್ದು, ಇಲಾಖೆಯ ಪಂಚತಂತ್ರ ತಂತ್ರಾಂಶದಲ್ಲಿ ಮಾನವ ಸಂಪನ್ಮೂಲ, ಗಣಕೀಕೃತ, ನಿರ್ವಹಣಾ ವ್ಯವಸ್ಥೆ ಜಾರಿ ಮೂಲಕ ವೇತನ ಪಾವತಿ ಸಂಬಂಧ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ಹೇಳಿದರು.

2014ರ ಸೆಪ್ಟೆಂಬರ್ 10ರಂದು ಗ್ರಾ.ಪಂ.ನೌಕರರನ್ನು ಸಕ್ರಮಗೊಳಿಸಲಾಗಿತ್ತು. ಕನಿಷ್ಠ ವೇತನ, ಸೇವಾ ಭದ್ರತೆ, ನಿವೃತ್ತಿ ಉಪದಾನಗಳಂತಹ ಪ್ರಮುಖ ಶಾಸನಬದ್ಧ ನಿಯಮಗಳಿಂದ ವಂಚಿತರಾಗಿರುವುದನ್ನು ತಿಳಿದು ಅವರ ಸೇವೆಯನ್ನು ಸಕ್ರಮಗೊಳಿಸಲಾಗಿತ್ತು. ಆದರೂ ಕಾಲಕಾಲಕ್ಕೆ ಪಂಚಾಯತ್ ನಿಂದ ವೇತನ ಪಾವತಿ ಆಗುತ್ತಿರಲಿಲ್ಲ. ರಾಜ್ಯ ಸರಕಾರದಿಂದ ವೇತನ ಪಾವತಿಸಲು ಮಂಜೂರಾತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸುವೆ ಎಂದ ಅವರು, ಗ್ರಾಪಂ ನೌಕರರು ಇನ್ನು ಮುಂದೆ ಹೆಚ್ಚು ಬದ್ಧತೆ, ಶಿಸ್ತಿನಿಂದ ಕೆಲಸ ಮಾಡಬೇಕೆಂದು ಇದೇ ವೇಳೆ ಕಿವಿಮಾತು ಹೇಳಿದರು.

ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರದಲ್ಲಿ ರಾಜ್ಯ ಸರಕಾರ ಮೊದಲ ಸ್ಥಾನದಲ್ಲಿದೆ. ಶೌಚಾಲಯದ ನಿರ್ಮಾಣದಲ್ಲೂ ಶೇ.90ರಷ್ಟು ಪ್ರಗತಿ ಸಾಧಿಸಿದೆ ಎಂದ ಅವರು, ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಮಾ.5ಕ್ಕೆ ನೇಮಕಾತಿ ಆದೇಶ:
‘ನೂತನವಾಗಿ ನೇಮಕಗೊಂಡಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಗ್ರಾ.ಪಂ.ಕಾರ್ಯದರ್ಶಿಗಳಿಗೆ ಮಾ.5ರಂದು ವಿಧಾನಸೌಧದ ಆವರಣದಲ್ಲಿನ ಗಾಂಧಿ ಪ್ರತಿಮೆಯ ಬಳಿ ಪ್ರತಿಜ್ಞಾವಿಧಿ ಬೋಧಿಸಿ ನೇಮಕಾತಿ ಆದೇಶ ನೀಡಲಾಗುವುದು. ಪಿಡಿಒ-815, ಗ್ರಾ.ಪಂ.ಕಾರ್ಯದರ್ಶಿ-850 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ’
-ಎಚ್.ಕೆ.ಪಾಟೀಲ್ ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News