ಮಂಡ್ಯ: ಮಾ.8 ರಂದು ಪುಟ್ಟಣ್ಣಯ್ಯಗೆ ಹಸಿರು ನಮನ; ಸಿಎಂ ಸಿದ್ದರಾಮಯ್ಯ ಆಗಮನ

Update: 2018-03-04 14:14 GMT

ಮಂಡ್ಯ, ಮಾ.4: ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಮಾ.8ರಂದು ಅಗಲಿದ ರೈತ ಚೇತನ ಕೆ.ಎಸ್.ಪುಟ್ಟಣ್ಣಯ್ಯನವರಿಗೆ ಹಸಿರು ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿದೆ ಎಂದು ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಪಟ್ಟಣ್ಣದಲ್ಲಿ ರವಿವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, ಪುಟ್ಟಣ್ಣಯ್ಯನವರ ವಿಚಾರ, ಆದರ್ಶ, ಕನಸು, ಚಿಂತನೆಗಳ ಬಗ್ಗೆ ಮುಂದಿನ ಪೀಳಿಗೆ ಮನವರಿಕೆ ಮಾಡಿಕೊಡುವ ಸಂಬಂಧ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಹಲವಾರು ಮಠಾಧೀಶರು, ಸಚಿವರು, ಶಾಸಕರು, ಜನಪರ ಚಿಂತಕರು, ಪ್ರಗತಿಪರ ಚಿಂತರು, ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಅಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಐದುದೀಪ ವೃತ್ತದಿಂದ ಪುಟ್ಟಣ್ಣಯ್ಯ ಭಾವಚಿತ್ರದೊಂದಿಗೆ ನೂರಾರು ಕಾರ್ಯಕರ್ತರು ಮೌನ ಮೆರವಣಿಗೆ ಮೂಲಕ ಪಟ್ಟಣದ ಪಾಂಡವ ಕ್ರೀಡಾಂಗಣಕ್ಕೆ ಬರಲಾಗುವುದು. ಸಾರ್ವಜನಿಕರು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಪುಟ್ಟಣ್ಣಯ್ಯನವರ ವಿಚಾರಗಳು ಕೇವಲ ರಾಜ್ಯಗಳಲ್ಲಿಯೇ ಅಷ್ಟೇ ಅಲ್ಲ ರಾಷ್ಟ್ರ, ಅಂತರಾಷ್ಟ್ರಮಟ್ಟದಲ್ಲೂ ಚರ್ಚೆಯಾಗಿವೆ. ಅಂತಹ ಮಹಾನ್ ನಾಯಕರಿಗೆ ಅರ್ಥಪೂರ್ಣವಾಗಿ ನಮನ ಸಲ್ಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ರೈತಸಂಘದ ತಾಲೂಕು ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಕೋಟಿ ಶಂಕರೇಗೌಡ, ಶ್ರೀನಿವಾಸ್, ಗೋಪಾಲ್, ಮಂಜುನಾಥ್, ಅಭಿ ಹಾಗೂ ರಘು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News