ಪ್ರಬುದ್ಧರ ಒಪ್ಪಿತ ವಿವಾಹದಲ್ಲಿ ಮೂರನೇ ವ್ಯಕ್ತಿ ಮಧ್ಯೆ ಪ್ರವೇಶಿಸುವಂತಿಲ್ಲ: ಸುಪ್ರೀಂ
ಹೊಸದಿಲ್ಲಿ, ಮಾ. 7: ಇಬ್ಬರು ಪ್ರಾಯ ಪ್ರಬುದ್ಧರು ತಮ್ಮ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಳ್ಳದೆ ವಿವಾಹವಾಗಲು ಒಪ್ಪಿದಲ್ಲಿ, ಅವರಿಗೆ ಸಂಬಂಧಿಕರು ಅಥವಾ ಮೂರನೇ ವ್ಯಕ್ತಿ ಬೆದರಿಕೆ ಒಡ್ಡಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಅಂತರ್ಜಾತಿ ಹಾಗೂ ಅಂತರ್ ಧರ್ಮ ವಿವಾಹವಾಗುವ ಜೋಡಿಗೆ ರಾಜ್ಯ ಸರಕಾರಗಳು ರಕ್ಷಣೆ ನೀಡಬೇಕು ಹಾಗೂ ಯಾರಾದರೂ ಬೆದರಿಕೆ ಒಡ್ಡಿದಲ್ಲಿ ಅಂತಹ ಜೋಡಿ ವಿವಾಹ ನೋಂದಣಿ ಅಧಿಕಾರಿಗೆ ಮಾಹಿತಿ ನೀಡಬೇಕು. ಆಗ ಅವರಿಗೆ ರಕ್ಷಣೆ ನೀಡಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿತು. ಮರ್ಯಾದೆ ಹತ್ಯೆಯ ಬೆದರಿಕೆ ಇರುವ ದಂಪತಿಗೆ ರಕ್ಷಣೆ ನೀಡುವಂತೆ ಕೋರಿ 2010ರಲ್ಲಿ ಸರಕಾರೇತರ ಸಂಸ್ಥೆ ಶಕ್ತಿ ವಾಹಿನಿ ಸುಪ್ರೀಂ ಕೋರ್ಟ್ನಲ್ಲಿ ದಾಖಲಿಸಿದ ದಾವೆ ಕುರಿತು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ವಿಸ್ತೃತ ತೀರ್ಪು ನೀಡಿತು.
ಇಬ್ಬರು ಪ್ರಾಯ ಪ್ರಬುದ್ಧರು ತಮ್ಮ ಹಿನ್ನೆಲೆ ಪರಿಗಣಿಸದೆ ಒಪ್ಪಿಗೆಯಿಂದ ವಿವಾಹವಾದರೆ, ಸಂಬಂಧಿಕರಾಗಲಿ, ಮೂರನೇ ವ್ಯಕ್ತಿಯಾಗಲಿ ವಿರೋಧಿಸುವಂತಿಲ್ಲ. ಅವರ ಜೀವಕ್ಕೆ ಬೆದರಿಕೆ ಅಥವಾ ಹಿಂಸಾಚಾರದ ಮೂಲಕ ಮಧ್ಯಪ್ರವೇಶಿಸುವಂತಿಲ್ಲ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನೂ ಒಳಗೊಂಡ ಪೀಠ ಹೇಳಿದೆ.