2000 ವರ್ಷ ಪ್ರಾಚೀನ ಮಧುರೈ ಮಠದಿಂದ ವಜಾ : ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಸ್ವಾಮಿ ನಿತ್ಯಾನಂದ
ಹೊಸದಿಲ್ಲಿ, ಮಾ. 17: ಮಧುರೈ ಅಧೀನಂ ಮಠದ ಮಠಾಧೀಶರಾಗಿ ಕಾರ್ಯ ನಿರ್ವಹಿಸುವುದು ಹಾಗೂ ಮಧುರೈಯ ಮೀನಾಕ್ಷಿ ಅಮ್ಮನ್ ದೇವಾಲಯದ ಸಮೀಪವಿರುದ 2000 ವರ್ಷ ಪ್ರಾಚೀನ ಶೈವ ಮಠ ಪ್ರವೇಶಿಸುವುದನ್ನು ನಿಷೇಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಸ್ಪಘೋಷಿತ ದೇವ ಮಾನವ ಸ್ವಾಮಿ ನಿತ್ಯಾನಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಅಕ್ಟೋಬರ್ 11ರಂದು ಮಧುರೈ ಪೀಠ ಮಧ್ಯಂತರ ಆದೇಶ ನೀಡಿತ್ತು. ಈ ಆದೇಶದಿಂದ ಆರಾಧನೆ ಹಾಗೂ ಧರ್ಮಾನುಸರಣೆಯ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಪ್ರತಿಪಾದಿಸಿ ಸ್ವಾಮಿ ನಿತ್ಯಾನಂದ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದಾರೆ. ಅವರು ಅಧೀನಂನ ಕಿರಿಯ ಮಠಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರೂ ಉಚ್ಚ ನ್ಯಾಯಾಲಯ ರಿಟ್ ಅರ್ಜಿ ಸ್ವೀಕರಿಸಿ, 2012ರಲ್ಲಿ ಇದೇ ರೀತಿಯ ಮನವಿ ತಿರಸ್ಕರಿಸಲಾಗಿತ್ತು ಎಂಬ ಸತ್ಯ ನಿರ್ಲಕ್ಷಿಸಿ ಮದ್ಯಂತರ ಆದೇಶ ಜಾರಿ ಮಾಡಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಸ್ವಾಮಿ ನಿತ್ಯಾನಂದ ಪರವಾಗಿ ನ್ಯಾಯವಾದಿ ಎಂ. ನುಲಿ ದಾಖಲಿಸಿದ ವಿಶೇಷ ರಜಾ ಕಾಲದ ಅರ್ಜಿ ಸೋಮವಾರ ನ್ಯಾಯಾಲಯದ ಮುಂದೆ ಪರಿಗಣನೆಗೆ ಬರಲಿದೆ.