ಪ.ಜಾ., ಪ.ಪಂ. ಕಾಯ್ದೆ ಅಡಿ ಸರಕಾರಿ ನೌಕರರ ಬಂಧನ ಇಲ್ಲ: ಸುಪ್ರೀಂ ಕೋರ್ಟ್
ಚೆನ್ನೈ, ಮಾ. 20: ಸರಕಾರಿ ಉದ್ಯೋಗಿಗಳ ವಿರುದ್ಧ ಕಠಿಣ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾನೂನು ದುರ್ಬಳಕೆಯನ್ನು ಮಂಗಳವಾರ ಗಮನಕ್ಕೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಈ ಕಾನೂನಿನ ಅಡಿಯಲ್ಲಿ ಯಾವುದೇ ದೂರು ದಾಖಲಾದರೂ ಕೂಡಲೇ ಬಂಧಿಸುವಂತಿಲ್ಲ ಎಂದಿದೆ.
ಎಸ್ಸಿ, ಎಸ್ಟಿ ಕಾಯ್ದೆ ಅಡಿ ಸರಕಾರಿ ನೌಕರರನ್ನು ಬಂಧಿಸುವ ಮುನ್ನ ಉಪ ಅಧೀಕ್ಷಕ ಶ್ರೇಣಿಯ ಕೆಳಗಿನವರಲ್ಲದ ಅಧಿಕಾರಿಗಳಿಂದ ಪ್ರಾಥಮಿಕ ತನಿಖೆ ನಡೆಸುವುದು ಕಡ್ಡಾಯ ಎಂದು ನ್ಯಾಯಾಲಯ ಹೇಳಿದೆ. ಈ ಕಠಿಣ ಕಾನೂನು ಅಡಿಯಲ್ಲಿ ಬಂಧಿತರಾದ ಸರಕಾರಿ ನೌಕರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಯಾವುದೇ ಅಡ್ಡಿ ಇಲ್ಲ ಎಂದು ನ್ಯಾಯಮೂರ್ತಿ ಆದರ್ಶ್ ಗೋಯಲ್ ಹಾಗೂ ಯು.ಯು. ಲಲಿತ್ ಅವರನ್ನು ಒಳಗೊಂಡ ಪೀಠ ಹೇಳಿದೆ. ಕೆಲವು ನಿರ್ದೇಶನಗಳನ್ನು ನೀಡಿರುವ ಪೀಠ, ಸಂಬಂಧಿತ ಪ್ರಾಧಿಕಾರದ ಪೂರ್ವಭಾವಿ ಅನುಮತಿ ಬಳಿಕವೇ ಎಸ್ಸಿ, ಎಸ್ಟಿ ಕಾಯ್ದೆ ಅಡಿ ದಾಖಲಾದ ದೂರಿನ ಹಿನ್ನೆಲೆಯಲ್ಲಿ ಸರಕಾರಿ ನೌಕರರನ್ನು ಬಂಧಿಸಬಹುದು ಎಂದಿದೆ.