ಮಡಿಕೇರಿ: ಶಾಸಕದ್ವಯರಿಗೆ ಟಿಕೆಟ್ ನೀಡದಿದ್ದರೆ ಬಂಡಾಯ ಸ್ಪರ್ಧೆ; ಮಣಿ ಉತ್ತಪ್ಪ

Update: 2018-03-22 12:09 GMT

ಮಡಿಕೇರಿ, ಮಾ.22: ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಅಂಟಿಸಿಕೊಳ್ಳದ ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಎಂಪಿ.ಅಪ್ಪಚ್ಚು ರಂಜನ್ ರವರಿಗೆ ಈ ಬಾರಿಯ ಬಿಜೆಪಿ ಟಿಕೆಟ್ ನೀಡದಿದ್ದಲ್ಲಿ ತಾವು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಸ್ಪರ್ಧೆಗಿಳಿಯುವುದಾಗಿ ಚೆಟ್ಟಳ್ಳ್ಳಿ ಜನಪರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಇಬ್ಬರು ಹಾಲಿ ಶಾಸಕರುಗಳಿಗೆ ಬಿಜೆಪಿ ಟಿಕೆಟ್ ಸಿಗದಿದ್ದಲ್ಲಿ ಮತ್ತು ತಮಗೆ ಪಕ್ಷದ ಮೂಲಕ ಸ್ಪರ್ಧಿಸಲು ಅವಕಾಶ ನೀಡದೆ ಇದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದರು. ಹಿಂದುಗಳ ಮತ ತನ್ನ ಬೆಂಬಲಕ್ಕೆ ಇದೆಯೆಂದು ಅವರು ಇದೇ ಸಂದರ್ಭ ತಿಳಿಸಿದರು.

ಈ ಹಿಂದೆ ಸ್ಪೀಕರ್ ಆಗಿ ಕೆ.ಜಿ.ಬೋಪಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಪ್ಪಚ್ಚು ರಂಜನ್ ಜಿಲ್ಲೆಗಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನಪ್ರಿಯರಾಗಿದ್ದಾರೆ. ಪಕ್ಷ ಟಿಕೆಟ್ ನೀಡುವ ಸಂದರ್ಭ ಈ ಮಾನದಂಡವನ್ನು ಅನುಸರಿಸಬೇಕಾಗಿದೆ. ಆದರೆ, ಚುನಾವಣೆ ಸಮೀಪಿಸುವಾಗ ನಾನು ಒಬ್ಬ ಟಿಕೆಟ್ ಆಕಾಂಕ್ಷಿ ಎಂದು ಪಟ್ಟಿ ಬೆಳೆಸುವವರಿಗೆ ಮನ್ನಣೆ ನೀಡಬಾರದೆಂದರು.

ಕಳಂಕವೇ ಇಲ್ಲದ ಜನಪ್ರತಿನಿಧಿಗಳನ್ನು ಬದಲಾಯಿಸಿದ ಉದಾಹರಣೆ ಎಲ್ಲೂ ಇಲ್ಲ. ಆದರೆ, ಕೊಡಗು ಜಿಲ್ಲೆಯಲ್ಲಿ ಈ ರೀತಿಯ ಬೆಳವಣಿಗೆ ಎದುರಾದರೆ, ನನ್ನ ಸ್ಪರ್ಧೆ ಖಚಿತವೆಂದು ಮಣಿ ಉತ್ತಪ್ಪ ತಿಳಿಸಿದರು. 

ಆರೆಸ್ಸೆಸ್ ಮತ್ತು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತನಾದ ನನ್ನನ್ನು ಪಕ್ಷದೊಳಗೆ ಕಡೆಗಣಿಸಿದ ಪ್ರಸಂಗವೂ ನಡೆದಿದೆ. ಆದರೆ, ನಾನು ಬೇಸರಗೊಳ್ಳದೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದೇನೆ ಮತ್ತು ದೇವಾಲಯಗಳಲ್ಲಿ ಉರುಳು ಸೇವೆ ಮಾಡಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಮತ್ತು ಗೆಲ್ಲುವುದು ಸುಲಭದ ಮಾತಲ್ಲ. ಆದ್ದರಿಂದ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕೆಂದು ಮಣಿ ಉತ್ತಪ್ಪ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಖಜಾಂಚಿ ಧನಂಜಯ ಉಪಸ್ಥಿತರಿದ್ದರು. 
 
ಕೊಡಗಿನಲ್ಲಿ ಆರೆಸ್ಸೆಸ್ ನೆಲಕಚ್ಚಿದೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯ ವೈಖರಿ ಬಗ್ಗೆ ಬಿಜೆಪಿಯ ಹಿರಿಯ ಮುಖಂಡ, ಸೋಮವಾರಪೇಟೆ ತಾ.ಪಂ ಸದಸ್ಯ ಹಾಗೂ ಜನಪರ ಹೋರಾಟ ಸಮಿತಿಯ ಅಧ್ಯಕ್ಷರಾದ ಬಲ್ಲಾರಂಡ ಮಣಿ ಉತ್ತಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನಲ್ಲಿ ಆರೆಸ್ಸೆಸ್ ಶಾಖೆಗಳೇ ನಡೆಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಟಿಕೆಟ್ ನೀಡುವವರು ನಾವೇ ಎಂದು ಹೇಳಿಕೊಂಡರೆ ಸಾಲದು. ಟಿಕೆಟ್ ನೀಡಿದ ಮೇಲೆ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸವನ್ನು ಕೂಡ ಮಾಡಬೇಕು. ನಾನು ಆರೆಸ್ಸೆಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಎಂದು ಹೇಳಿಕೊಂಡು ಮನೆಯಲ್ಲಿ ಕುಳಿತರೆ ಸಾಲದು. ಸಂಘಟನೆಯ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಹೇಳಿದರು. 

ತಮ್ಮ ಕ್ಷೇತ್ರ ಚೆಟ್ಟಳ್ಳಿಯಲ್ಲಿ ಆರೆಸ್ಸೆಸ್ ನ ಆರು ಶಾಖೆಗಳು ನಡೆಯುತ್ತಿದ್ದವು, ಆದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲಾ ವ್ಯಾಪಿ ಎಲ್ಲೂ ಶಾಖೆಗಳು ನಡೆಯುತ್ತಿಲ್ಲ. ಈ ಹಿಂದಿನ ನಿಷ್ಠಾವಂತರ ಆರೆಸ್ಸೆಸ್ ಇಂದು ಇದೆಯೇ ಎಂದು ಬಲ್ಲಾರಂಡ ಮಣಿ ಉತ್ತಪ್ಪ ಪ್ರಶ್ನಿಸಿದರು.

ಕೊಡಗು ಬಿಜೆಪಿಯಲ್ಲಿ ಆರೆಸ್ಸೆಸ್ ನ ಪಾತ್ರ ಏನಿದೆ, ಬಿಜೆಪಿಗಾಗಿ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಮಣಿ ಉತ್ತಪ್ಪ ಪಕ್ಷದ ನೆಲೆಗಟ್ಟಿನಲ್ಲಿ ಟಿಕೆಟ್ ನೀಡಿದರೆ ಮಾತ್ರ ಬಿಜೆಪಿ ಅಭ್ಯರ್ಥಿ ಗೆಲ್ಲಲು ಸಾಧ್ಯವೆಂದು ಅಭಿಪ್ರಾಯಪಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News