ಅಪಘಾತದಲ್ಲಿ ಇಬ್ಬರು ಪತ್ರಕರ್ತರ ಸಾವು: ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬ
ಭೋಪಾಲ, ಮಾ. 26: ಕಾರು ಢಿಕ್ಕಿಯಾದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸ್ಥಳೀಯ ಪತ್ರಕರ್ತರು ಮೃತಪಟ್ಟ ಘಟನೆ ಭೋಜಪುರ ಜಿಲ್ಲೆಯಲ್ಲಿ ಸಂಭವಿಸಿದೆ. ಆದರೆ, ಇದು ಅಪಘಾತ ಅಲ್ಲ ಹತ್ಯೆ. ಈ ಹತ್ಯೆಯ ಹಿಂದೆ ಗ್ರಾಮದ ಮಾಜಿ ಮುಖ್ಯಸ್ಥನ ಕೈವಾಡ ಇದೆ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ.
ನವೀನ್ ಹಾಗೂ ಅವರ ಗೆಳೆಯ ವಿಜಯ್ ಸಿಂಗ್ ರವಿವಾರ ರಾತ್ರಿ ಬೈಕ್ನಲ್ಲಿ ತೆರಳುತ್ತಿದ್ದಾಗೆ, ನಹ್ಸಿ ಗ್ರಾಮದ ಸಮೀಪ ಕಾರೊಂದು ಢಿಕ್ಕಿ ಹೊಡೆಯಿತು. ಕೆರಳಿದ ಗ್ರಾಮಸ್ಥರು ಕಾರನ್ನು ತಡೆ ಹಿಡಿದರು. ಆದರೆ, ಕಾರಿನಲ್ಲಿದ್ದವರು ಪರಾರಿಯಾಗುವುದರಲ್ಲಿ ಯಶಸ್ವಿಯಾದರು. ಉದ್ರಿಕ್ತ ಗುಂಪು ಕಾರಿಗೆ ಬೆಂಕಿ ಹಚ್ಚಿತು ಎಂದು ಭೋಜಪುರದ ಪೊಲೀಸ್ ಅಧೀಕ್ಷಕ ಅವಕಾಶ್ ಕುಮಾರ್ ಹೇಳಿದ್ದಾರೆ. ನವೀನ್ನ ಸಹೋದರ ರಾಜೇಶ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪ್ರಥಮ ಮಾಹಿತಿ ವರದಿಯಲ್ಲಿ, ಇದು ಅಪಘಾತ ಅಲ್ಲ. ಕೊಲೆ. ಪಂಚಾಯತ್ನ ಮಾಜಿ ಮುಖ್ಯಸ್ಥ ಅಹ್ಮದ್ ಅಲಿ ಆಲಿಯಾಸ್ ಹರ್ಸು ಹಾಗೂ ಅವರ ಪುತ್ರ ಡಾಬ್ಲೂ ಅವರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ಎಸ್ಯುವಿ ಕಾರು ಹಸ್ರು ಅವರಿಗೆ ಸೇರಿದ್ದು ಎಂದು ಅವಕಾಶ್ ಕುಮಾರ್ ತಿಳಿಸಿದ್ದಾರೆ. ಪತ್ರಕರ್ತರ ಮೇಲೆ ಹರ್ಸುಗೆ ದ್ವೇಷವಿತ್ತು ಎಂದು ಪ್ರಥಮ ಮಾಹಿತಿ ವರದಿಯಲ್ಲಿ ಆರೋಪಿಸಲಾಗಿದೆ ಎಂದು ಅವಕಾಶ್ ಕುಮಾರ್ ತಿಳಿಸಿದ್ದಾರೆ. ನಾಪತ್ತೆಯಾಗಿರುವ ತಂದೆ ಹಾಗೂ ಮಗನ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಗ್ರಾಮದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ.