ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-04-02 16:20 GMT

ಮೈಸೂರು,ಏ.2: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಅವರು 25 ಸೀಟು ಗೆಲ್ಲಬಹುದು, ಅದರ ಮೇಲೆ ಒಂದೇ ಒಂದು ಸೀಟನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಳೆದ ಮೂರು ದಿನಗಳಿಂದ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ಅವರು, ಸೋಮವಾರ ಜಯಪುರ ಹೋಬಳಿಯಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ರಾಜ್ಯದಲ್ಲಿ ಸಿಎಂ ಆಗುತ್ತೇನೆ ಎಂದು ಕನಸು ಕಾಣುತ್ತಿದ್ದಾರೆ. ಅವರ ಕನಸನ್ನು ಮತದಾರರು ಈಡೇರಿಸುತ್ತಾರಾ ಎಂದು ಪ್ರಶ್ನಿಸಿದರು. ಅಲ್ಲದೆ ಅವರ ರಾಜಕೀಯ ಜೀವನ ಜನರಿಗೆ ಗೊತ್ತಿದೆ. ಹಾಗಾಗಿ 25 ಸೀಟು ಕಷ್ಟಪಟ್ಟರೆ ಗೆಲ್ಲುತ್ತಾರೆ ಹೇಳಿದರು.

ನಮ್ಮ ಸರಕಾರ ಮಾಡುವ ಕೆಲಸಗಳನ್ನು ಗುದ್ದಲಿ ಪೂಜೆ ಮಾಡಲು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು ಬರುತ್ತಾರೆ. ಈ ಕ್ಷೇತ್ರಕ್ಕೆ ಇಂತಹ ಕೆಲಸ ಆಗಬೇಕು ಎಂದು ಈವರೆಗೆ ಒಂದು ಪತ್ರ ಸಹ ಕೊಟ್ಟಿಲ್ಲ. ವಿಧಾನಸಭೆಯಲ್ಲಿ ಒಂದೂ ಮಾತನಾಡದ ಈ ವ್ಯಕ್ತಿ ಯಾವ ಶಾಸಕ, ಈತ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಶಾಸಕನೆಂದು ಜಿ.ಟಿ.ದೇವೇಗೌಡ ವಿರುದ್ಧ ಕಿಡಿಕಾರಿದರು.

ಜೆಡಿಎಸ್ ಹಾಗೂ ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳು ತಾವು ಸಿಎಂ ಆಗುತ್ತೇವೆ ಎಂದು ಹುರುಪಿನಿಂದ ಓಡಾಡುತ್ತಿದ್ದಾರೆ. ಆದರೆ ಇವರ ಬಂಡವಾಳ ರಾಜ್ಯದ ಜನರಿಗೆ ಗೊತ್ತಿದೆ. ಅಧಿಕಾರ ಕೊಟ್ಟಾಗ ಹೇಗೆ ದುರುಪಯೋಗ ಮಾಡಿಕೊಂಡರು. ಈಗ ಮತ್ತೆ ಅಧಿಕಾರ ಬೇಕಂತೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News