ಹಾಸನ: ನಾಗರಿಕ ಪೊಲೀಸ್ ಕಾನ್ಸ್ ಟೇಬಲ್‍ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ

Update: 2018-04-07 13:10 GMT

ಹಾಸನ,ಎ.07 : ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾನೂನು ಬದ್ಧವಾಗಿ ಸಮಾಜವನ್ನು ನಡೆಸುವುದು ಪೊಲೀಸ್ ಇಲಾಖೆಯ ಜವಾಬ್ಧಾರಿಯಾಗಿದೆ ಎಂದು ತರಬೇತಿ ಪೊಲೀಸ್ ಮಹಾನಿರ್ದೇಶಕ ಪಿ.ಕೆ. ಗರ್ಗ್ ಹೇಳಿದರು.

ತಾಲೂಕಿನ ಶಾಂತಿಗ್ರಾಮ ಗಾಡೇನಹಳ್ಳಿಯಲ್ಲಿರುವ ಪಿ.ಟಿ.ಎಸ್. ಕವಾಯತು ಮೈದಾನದಲ್ಲಿ 2ನೇ ತಂಡದ ನಾಗರೀಕ ಪೊಲೀಸ್ ಕಾನ್ಸ್‍ಟೇಬಲ್‍ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮುಖ್ಯ ಭಾಷಣದಲ್ಲಿ ಮಾತನಾಡಿದ ಅವರು, ಸರಳ ಮತ್ತು ಸಜ್ಜನಿಕೆ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಕಾನ್ಸ್‍ಟೇಬಲ್‍ಗೆ ತರಬೇತಿ ಕೊಡಲಾಗಿದೆ. ನಂತರ ಕರ್ತವ್ಯಕ್ಕೆ ಬಂದಾಗ ಮಾಡುವ ಕೆಲಸದಲ್ಲಿ ನಿಷ್ಟೆಯಿಂದ ಯಾವ ಭಯವಿಲ್ಲದೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಹಾಗೆಯೇ ನಿಮ್ಮ ವೃತ್ತಿಪರ ಕೆಲಸವನ್ನು ಕಾಪಾಡಬೇಕು ಎಂದು ಕಿವಿಮಾತು ಹೇಳಿದರು. ನಿಮ್ಮ ಹುದ್ದೆಯನ್ನು ಆಸಕ್ತಿ ಹಾಗೂ ನೆಮ್ಮದಿಯಿಂದ ಕೆಲಸ ಮಾಡುವ ಮೂಲಕ ಜನಸ್ನೇಹಿ ಸೇವೆ ಕೊಡಬೇಕು. ಇಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ನಿಮ್ಮ ಜೀವನದ ಭದ್ರತೆಗಾಗಿ ಭತ್ಯೆ ಮತ್ತು ಸಂಬಳವನ್ನು ಉತ್ತಮವಾಗಿ ನೀಡುತ್ತಾ ಬಂದಿದೆ ಎಂದರು.

ವಿಧಾನಸಭಾ ಚುನಾವಣೆ ಸಮೀಪದಲ್ಲಿದ್ದು, ಆಯೋಗ ನೀಡಿರುವ ಕಾನೂನನ್ನು ಮರೆಯಬಾರದು. ಶಾಂತಿ ಕಾಪಾಡುವ ನಿಟ್ಟಿನಲ್ಲಿ ನಿಮ್ಮ ಕರ್ತವ್ಯಕ್ಕೆ ಯಾವ ಲೋಪ ಬಾರದಂತೆ ನಿಭಾಯಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ಜಾತಿ, ಧರ್ಮ ಹಾಗೂ ಮತ ಮರೆತು ಕರ್ತವ್ಯ ನಿರ್ವಹಿಸಿ. ಬಡವ ಶ್ರೀಮಂತ ಎಂಬ ತಾರತಮ್ಯ ಮಾಡದೆ ಎಲ್ಲರಿಗೂ ಸಮನಾಗಿ ಕಾಣುವ ಮೂಲಕ ನೀಡಿರುವ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು ಎಂದು ಹೇಳಿ ತರಬೇತಿ ಪಡೆದ ಎಲ್ಲಾ ಪೊಲೀಸ್ ಕಾನ್ಸ್‍ಟೇಬಲ್‍ಗಳಿಗೆ ಶುಭ ಹಾರೈಸಿದರು.

ಶಾಂತಿಗ್ರಾಮ ತರಬೇತಿ ಶಾಲೆ ಪೊಲೀಸ್ ಅಧೀಕ್ಷಕರು ಹಾಗೂ ಪ್ರಾಂಶುಪಾಲರಾದ ಬಿ.ಎನ್. ನಂದಿನಿ ಅವರು ವರದಿ ವಾಚನ ಮಾಡಿ ಮಾತನಾಡುತ್ತಾ, ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿ ಶಾಂತಿಗ್ರಾಮದ ಸರಕಾರಿ ಗೋಮಾಳ ಸರ್ವೆ ನಂ. 510 ರಲ್ಲಿ ಒಟ್ಟು 50 ಎಕರೆ ಜಮೀನಿನಲ್ಲಿ ಪೊಲೀಸ್ ತರಬೇತಿ ಶಾಲೆಯನ್ನು ತೆರೆಯಲಾಗಿದೆ. ಒಟ್ಟು 20.50 ಕೋಟಿ ರೂ ಅನುದಾನದಲ್ಲಿ ಆಡಳಿತ ಕಚೇರಿ, ಉಪನ್ಯಾಸ ಕೊಠಡಿ, ಪ್ರಶಿಕ್ಷಣಾರ್ಥಿಗಳಿಗೆ ವಸತಿ ನಿಲಯ, ಊಟದ ವ್ಯವಸ್ಥೆಗಾಗಿ ಅಡಿಗೆ ಉಪಕರಣವನ್ನು ಒಳಗೊಂಡಂತೆ ಸುಸಜ್ಜಿತವಾದ ಕವಾಯತು ಮೈದಾನವನ್ನು ನಿರ್ಮಿಸಲಾಗಿದೆ ಎಂದರು.

2015-16 ರಲ್ಲಿ ಪ್ರಾರಂಭವಾದ ಪೊಲೀಸ್ ತರಬೇತಿ ಶಾಲೆಯಲ್ಲಿ 1ನೇ ತಂಡದಲ್ಲಿ 347 ಸಂಖ್ಯೆಯ ನಾಗರೀಕ ಪೊಲೀಸ್ ಪ್ರಶಿಕ್ಷಿಣಾರ್ಥಿಗಳಿಗೆ ಬುನಾದಿ ತರಬೇತಿ ನಿಡಲಾಯಿತು. 2ನೇ ತಂಡವಾಗಿ 8 ತಿಂಗಳ ಕಾಲ 372 ಸಂಖ್ಯೆ ನಾಗರೀಕ ಪೊಲೀಸ್ ತರಬೇತಿ ಕೊಡಲಾಗಿದೆ. ಬೆಂಗಳೂರು ನಗರ ಕೇಂದ್ರ ವಿಭಾಗದಿಂದ-5, ಪೂರ್ವ ವಿಭಾಗದಿಂದ-4, ಉತ್ತರ ವಿಭಾಗದಿಂದ 89, ದಕ್ಷಿಣ ವಿಭಾಗದಿಂದ-34, ಆಗ್ನೇಯ ವಿಭಾಗದಿಂದ-1, ಇಶಾನ್ಯ ವಿಭಾಗದಿಂದ-1, ಸಂಚಾರ ಪಶ್ಚಿಮ ವಿಭಾಗದಿಂದ-17, ಸಂಚಾರ ಪೂರ್ವ ವಿಭಾಗದಿಂದ-6, ಪೊಲೀಸ್ ಆಯಕ್ತರು ಮಂಗಳೂರು ನಗರದಿಂದ-105, ಹಾವೇರಿ ಜಿಲ್ಲೆಯಿಂ-11, ಬೆಂಗಳೂರು ವಿಭಾಗದಿಂದ-1, ದಾವಣಗೆರೆ ವಿಭಾಗದಿಂದ 14, ಕಲಬುರ್ಗಿ ಜಿಲ್ಲೆಯಿಂದ-4, ಬೀದರ್ ಜಿಲ್ಲೆಯಿಂದ-1, ರಾಯಚೂರು ಜಿಲ್ಲೆಯಿಂದ-2, ಚಿಕ್ಕಬಳ್ಳಾಪುರದಿಂದ-51, ಕೆ.ಜಿ.ಎಫ್. ಜಿಲ್ಲೆಯಿಂದ 41 ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಇವರಿಗೆ ಪಿಟಿ, ಯುಎಸಿ, ಕರಾಟೆ, ಅಬ್ಸ್‍ಟ್ಯಾಕಲ್ ಕೋರ್ಸ್, ವಿವಿಧ ಕ್ರೀಡೆಗಳೂ, ಯೋಗ, ಶಸ್ತ್ರರಹಿತ-ಶಸ್ತ್ರಸಹಿತ ಕವಾಯತ್, ಲಾಠಿ ಡ್ರಿಲ್, ಗುಂಪು ಘರ್ಷಣೆ ನಿಯಂತ್ರಣ, ಅಶ್ರುವಾಯು ಬಳಕೆ, ಗಣ್ಯ ವ್ಯಕ್ತಿಗಳಿಗೆ ಭದ್ರತೆ, ವೆಪನ್ ಟ್ರೈನಿಂಗ್, ಮ್ಯಾಪ್ ರೀಡಿಂಗ್, ಫೀಲ್ಡ್ ಕ್ರಾಪ್ಟ್ ಇತರೆ ಬಗ್ಗೆ ಬೋಧಿಸಲಾಗಿದೆ ಎಂದರು.

ತರಬೇತಿಯಲ್ಲಿ ಪೊಲೀಸ್ ಕರ್ತವ್ಯಗಳು, ಮಾನವ ಹಕ್ಕುಗಳು, ಲಿಂಗ ಸಂವೇದನೆ, ಮಕ್ಕಳು ಹಾಗೂ ಮಹಿಳೆಯರೊಂದಿಗೆ ಪೊಲೀಸರ ವರ್ತನೆ, ಮೃದು ಕೌಶಲ್ಯಗಳ ಬೆಳವಣಿಗೆ ಬಗ್ಗೆ ಕಾರ್ಯಗಾರವನ್ನು ಕೂಡ ನಡೆಸಲಾಗಿದೆ. ಪ್ರಥಮ ಚಿಕಿತ್ಸೆ ಹಾಗೂ ಬೆಂಕಿಯನ್ನು ಶಮನಗೊಳಿಸುವ ತರಬೇತಿ ಪ್ರಾತ್ಯಕ್ಷಿಕೆ, ಜಿಲ್ಲಾ ಅಗ್ನಿಶಾಮಕ, ತುರ್ತು ಸೇವೆ ದಳದವರಿಂದ ನಡೆಸಲಾಯಿತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೊದಲು ಗೌರವ ವಂದನೆ ಸ್ವೀಕರಿಸಲಾಯಿತು. ಪರೇಡ್ ಕಮಾಂಡರ್ ರಿಂದ ವರದಿ ಮತ್ತು ಮುಖ್ಯ ಅತಿಥಿಗಳಿಂದ ತುಕಡಿಗಳ ವೀಕ್ಷಣೆ ಮಾಡಿದರು. ಪಥ ಸಂಚಲನ, ಸ್ಲೋ ಮಾರ್ಚ್ ಮತ್ತು ಕ್ಷಿಕ್ ಮಾರ್ಚ್‍ನ್ನು 2ನೇ ತಂಡದ ನಾಗರೀಕ ಪೊಲೀಸ್ ಕಾನ್ಸ್‍ಟೇಬಲ್‍ಗಳು ಮಾಡಿದರು. ತರಬೇತಿ ಸಮಯದಲ್ಲಿ ಉತ್ತಮ ಅಂಕಗಳಿಸಿದವರಿಗೆ ಬಹುಮಾನ ನೀಡಿ ಗೌರವಿಸಿದರು. ಈ ವೇಳೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಿಐಡಿ ಮತ್ತು ತರಬೇತಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ಎಸ್.ಆರ್. ಚರಣ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಕಮಾಡೆಂಟ್ ಕೃಷ್ಣಪ್ಪ, ತರಬೇತಿ ಶಾಲೆಯ ಪುಟ್ಟ ಮಾದಯ್ಯ ಇತರರು ಪಾಲ್ಗೊಂಡಿದ್ದರು. ಪೊಲೀಸ್ ತರಬೇತಿ ಶಾಲೆ ಕಾನೂನು ಅಧಿಕಾರಿ ನಾಗೇಂದ್ರ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News