ನವಲಗುಂದದ ಹುತಾತ್ಮ ರೈತರು!

Update: 2019-07-20 15:55 GMT

ಕರ್ನಾಟಕ ಹಲವು ಕ್ರಾಂತಿಗಳ ತವರೂರು. 12ನೇ ಶತಮಾನದ ಶರಣ ಚಳವಳಿ ಇಡೀ ದೇಶವನ್ನೇ ಕಂಪಿಸುವಂತೆ ಮಾಡಿತು. ಜಾತಿಯ ವಿರುದ್ಧ ನಡೆದ ಈ ಕ್ರಾಂತಿ, ದುರಂತದಲ್ಲಿ ಮುಕ್ತಾಯಕಂಡರೂ, ಆ ಚಳವಳಿಯ ಮೂಲಕವೇ ಲಿಂಗಾಯತ ಧರ್ಮವೊಂದು ಕುಡಿಯೊಡೆಯಿತು. ಆ ಮೂಲಕ ಒಂದು ಸ್ವತಂತ್ರ ಧರ್ಮದ ಉಗಮಕ್ಕೆ ಕರ್ನಾಟಕ ಸಾಕ್ಷಿಯಾಯಿತು. ಇದಾದ ಬಳಿಕ ಕಾಲ ಕಾಲಕ್ಕೆ ಬೇರೆ ಬೇರೆ ರೀತಿಯಲ್ಲಿ ಕ್ರಾಂತಿಗಳು ನಡೆಯುತ್ತಲೇ ಬಂದವು. ಸ್ವಾತಂತ್ರಾನಂತರ ಈ ರಾಜ್ಯದಲ್ಲಿ ದಲಿತ ಹೋರಾಟ ಮತ್ತು ರೈತ ಹೋರಾಟ ಹಲವು ಬೆಳವಣಿಗೆಗಳಿಗೆ ಕಾರಣವಾಯಿತು. ಒಂದು ಕಾಲದಲ್ಲಿ ರೈತರು ಮತ್ತು ದಲಿತರು ಒಟ್ಟು ಸೇರಿದರೆಂದರೆ ಸರಕಾರ ನಡುಗುತ್ತಿತ್ತು.

ದುರದೃಷ್ಟಕ್ಕೆ, ಇಂದು ರೈತ ಸಂಘಟನೆಗಳು ಬಲಹೀನವಾಗಿವೆ. ಜಾತಿ ಸಂಘಟನೆಗಳು ವಿವಿಧ ಪಕ್ಷಗಳಲ್ಲಿ ಹಂಚಿ ಹೋಗಿವೆ. ಆದರೆ ಇಂದಿಗೂ ಉತ್ತರ ಕರ್ನಾಟಕದಲ್ಲಿ ರೈತರು ನೀರಿಗಾಗಿ ಒಟ್ಟು ಸೇರಿದರೆಂದರೆ ಸರಕಾರ ಸಣ್ಣಗೆ ನಡುಗುತ್ತದೆ. ಇತ್ತೀಚೆಗೆ ನಡೆದ ಮಹಾದಾಯಿ ರೈತರ ಹೋರಾಟವೇ ಇದಕ್ಕೆ ಉದಾಹರಣೆ. ಇದಕ್ಕೊಂದು ಕಾರಣವೂ ಇದೆ. ಇಲ್ಲಿ ರೈತರು ಒಂದಾದರೆಂದರೆ ಅದು ನಿಧಾನಕ್ಕೆ ದಂಗೆಯ ಸ್ವರೂಪ ಪಡೆಯುತ್ತದೆ. ಇಲ್ಲಿನ ರಾಜಕೀಯ ನಾಯಕರ ಮನದಲ್ಲಿ ಈ ಭಾಗದಲ್ಲಿ ನಡೆದ ನವಲಗುಂದ-ನರಗುಂದ ರೈತರ ಬಂಡಾಯ ಇನ್ನೂ ಹಸಿಯಾಗಿಯೇ ಇದೆ. ರಾಜ್ಯ ಸರಕಾರದ ಬೆಟರ್ಮೆಂಟ್ ಲೆವಿ ಕಾಯ್ದೆಯ ವಿರುದ್ಧ ನವಲಗುಂದ- ನರಗುಂದ ರೈತರು 1980, ಜು. 21ರಂದು ತಿರುಗಿ ಬಿದ್ದರು. ಈ ಬಂಡಾಯ ಹಲವು ರೈತರು ಮತ್ತು ಓರ್ವ ಪೊಲೀಸ್ ಸಿಬ್ಬಂದಿಯ ಸಾವಿಗೆ ಕಾರಣವಾಯಿತು. ಅಂತಿಮವಾಗಿ ಅಂದಿನ ಗುಂಡೂರಾವ್ ಸರಕಾರವೇ ರೈತರ ಆಕ್ರೋಶಕ್ಕೆ ಬಲಿಯಾಗಿ ಅಧಿಕಾರ ಕಳೆದುಕೊಂಡಿತು. ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಪ್ರದೇಶದಲ್ಲಿ ಮಲಪ್ರಭಾ ಅಣೆಕಟ್ಟು ನಿರ್ಮಾಣವಾದ ಬಳಿಕ ಅಂದಿನ ಗುಂಡೂರಾವ್ ಸರಕಾರ ಅಚ್ಚುಕಟ್ಟು ಪ್ರದೇಶದ ರೈತರ ಭೂಮಿಗಳಿಗೆ ಪ್ರತಿ ಎಕರೆಗೆ 1,500 ರೂಪಾಯಿ ಕರವನ್ನು ಗೊತ್ತುಪಡಿಸಿ ಬೆಟರ್ಮೆಂಟ್ ಲೆವಿ ಕಾಯ್ದೆ ಹೇರಿತು. ಆದರೆ ನೀರನ್ನೇ ಪಡೆಯದ ರೈತರನ್ನೂ ಅಚ್ಚುಕಟ್ಟು ಪ್ರದೇಶದ ರೈತರೆಂದು ಸರಕಾರ ಪರಿಗಣಿಸಿತ್ತು. ನಾವೇಕೆ ಲೇವಿ ಕಟ್ಟಬೇಕು ಎಂದು ಈ ಪ್ರದೇಶದ ರೈತರು ಪ್ರಶ್ನಿಸಿದರು. ಅದರಲ್ಲೂ ಧಾರವಾಡ ಜಿಲ್ಲೆಯ ನವಲಗುಂದ ಮತ್ತು ಗದಗ ಜಿಲ್ಲೆಯ ನರಗುಂದ ರೈತರು ಹೋರಾಟದ ಹಾದಿ ತುಳಿದರು. ಇದರ ನೇತೃತ್ವವನ್ನು ಪ್ರೊ. ನಂಜುಂಡ ಸ್ವಾಮಿ ವಹಿಸಿಕೊಂಡಿದ್ದರು. ಆದರೆ ಸರಕಾರ ತನ್ನ ಸರ್ವಾಧಿಕಾರವನ್ನು ಮುಂದುವರಿಸಿದಾಗ ಹೋರಾಟ ತೀವ್ರಗೊಂಡು, ರೈತರು ಬಂಡಾಯವೆದ್ದರು.

ಇದೇ ವೇಳೆ ಪೊಲೀಸರು ಗೋಲಿಬಾರ್ ಮಾಡಲಾಗಿ, ಅಳಗವಾಡಿ ಗ್ರಾಮದ ರೈತ ಬಸಪ್ಪಲಕ್ಕುಂಡಿ ಮೃತಪಟ್ಟರೆ, ನರಗುಂದರಲ್ಲಿ ವೀರಪ್ಪ ಕಡ್ಲಿಕೊಪ್ಪ ಅನ್ನೋ ರೈತ ಮೃತಪಟ್ಟರು. ಅದಾಗಿ ಒಂದೇ ತಿಂಗಳಿಗೆ ಇದೇ ಕಾರಣಕ್ಕಾಗಿ ಗುಂಡೂರಾವ್ ಸರಕಾರ ಬಿದ್ದು ಹೋಯಿತು. ಅಂದಿನಿಂದ ಜುಲೈ 21 ರಂದು ರೈತ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಕ್ಕೆ ಇದೀಗ 39 ವರ್ಷ. ನವಲಗುಂದದ ಹೋರಾಟದ ಕಿಚ್ಚು ಇನ್ನೂ ಆರಿಲ್ಲ ಎನ್ನುವುದು ಮತ್ತೆ ಸಾಬೀತಾಗಿದ್ದು ಕಳಸಾ-ಬಂಡೂರಿ ಮತ್ತು ಮಹಾದಾಯಿ ಹೋರಾಟಗಳ ಮೂಲಕ. ಮಹಾದಾಯಿ ಹೋರಾಟದ ಸಂದರ್ಭದಲ್ಲಿ ರೈತರ ಜೊತೆಗೆ ಎಲ್ಲ ಕ್ಷೇತ್ರಗಳ ಮುಂಖಂಡರೂ ಕೈ ಜೋಡಿಸಿದರು. ರಾಜ್ಯ ಸರಕಾರವೇ ತಬ್ಬಿಬ್ಬಾಗುವಂತೆ ಚಳವಳಿ ಕಾವು ಪಡೆಯಿತು. ಇಂದಿಗೂ ಈ ಚಳವಳಿ ಬೂದಿ ಮುಚ್ಚಿದ ಕೆಂಡವಾಗಿ ಮಹಾದಾಯಿ ನದಿ ಪಾತ್ರದ ರೈತರನ್ನು ಕಾಯುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಹುಶಃ ರೈತರ ಬಂಡಾಯದ ಕೊನೆಯ ಕುಡಿ ಈ ಭಾಗದಲ್ಲಿ ಇನ್ನೂ ಗಾಳಿಗೆ ಸಿಕ್ಕಿದ ಸೊಡರಿನಂತೆ ಹೊಯ್ದಿಡುತ್ತಿದೆ. ಕಳೆದ ಜುಲೈ 16ಕ್ಕೆ ಇಲ್ಲಿನ ಕಳಸಾ ಬಂಡೂರಿ ಯೋಜನೆಯ ರೈತ ಹೋರಾಟಕ್ಕೆ ನಾಲ್ಕು ವರ್ಷವಾಗುತ್ತದೆ.

ಈ ರೈತರೇ ನವಲಗುಂದ ಹೋರಾಟದ ಕಿಡಿಯನ್ನು ಈ ಭಾಗದಲ್ಲಿ ಜೀವಂತವಾಗಿಟ್ಟಿದ್ದಾರೆ. ಮಹಾದಾಯಿ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರಕಾರ ಅಡ್ಡಗಾಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಇಲ್ಲಿನ ರೈತರು ಈ ವರ್ಷವೂ ಬಂದ್ ಆಚರಿಸಿದ್ದಾರೆ. ಕೇಂದ್ರ ಸರಕಾರ ಈ ಭಾಗದ ರೈತರ ನೀರಿಗೆ ತೊಡರು ಗಾಲು ಹಾಕಿದರೆ, ನವಲಗುಂದ ಮತ್ತೊಮ್ಮೆ ಬೆಂಕಿಯಾಗುವುದರಲ್ಲಿ ಎರಡು ಮಾತಿಲ್ಲ.

Writer - ಹೂಬಳ್ಳಿ ಬಸವರಾಜ ದೇಸಿ

contributor

Editor - ಹೂಬಳ್ಳಿ ಬಸವರಾಜ ದೇಸಿ

contributor

Similar News