ಕೊಡಗಿನಲ್ಲಿ ಮಳೆ ಕೊರತೆ: ಕೃಷಿ ಕಾರ್ಯಕ್ಕೆ ಭಾರೀ ಹಿನ್ನಡೆ

Update: 2019-08-02 17:48 GMT

ಮಡಿಕೇರಿ, ಆ.2: ಕೊಡಗು ಜಿಲ್ಲೆಯಲ್ಲಿ ಮುಂಗಾರು ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದ್ದು, ಜುಲೈ ಅಂತ್ಯದವರೆಗೆ ಕೇವಲ ಶೇ.11ರಷ್ಟು ಮಾತ್ರ ಸಾಧನೆಯಾಗಿದೆ.

ಜಿಲ್ಲೆಯಲ್ಲಿ 34,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಶೇ.10.59 ಮಾತ್ರ ಒಟ್ಟಾರೆ ಕೃಷಿಯಲ್ಲಿ ಸಾಧನೆ ಗೋಚರಿಸಿದೆ. ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮುಂಗಾರು ಮಳೆಯಲ್ಲಿ ಕೂಡ ಶೇ.45.7 ರಷ್ಟು ಹಿನ್ನಡೆ ಕಂಡುಬಂದಿದೆ. ಜಿಲ್ಲೆಯಲ್ಲಿ 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆಯಾದರೂ, ಇದುವರೆಗೆ ಕೇವಲ 822 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಮುಗಿದಿದ್ದು, 2830 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬೆಳೆಯಲಾಗಿದೆ. ಇದನ್ನು ಗಮನಿಸಿದಾಗ ಈ ಬಾರಿ ಭತ್ತದ ಕೃಷಿಯಲ್ಲಿ ಕೇವಲ ಶೇ.2.70 ಹಾಗೂ ಜೋಳದ ಕೃಷಿಯಲ್ಲಿ ಶೇ.70.75ರಷ್ಟು ಸಾಧನೆ ಮಾಡಿದಂತಾಗಿದ್ದು, ಮಳೆಯ ಕೊರತೆಯಿಂದಾಗಿ ಈ ಬಾರಿ ಕೃಷಿ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಮಡಿಕೇರಿ ತಾಲೂಕು: ಮಡಿಕೇರಿ ತಾಲೂಕಿನಲ್ಲಿ 6,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆಯಾದರೂ, ಈ ಬಾರಿ ಶೇ.20 ಪ್ರದೇಶದಲ್ಲಿ ಸಸಿ ಮಡಿಯೊಂದಿಗೆ 1300 ಹೆಕ್ಟೇರ್ ನಲ್ಲಿ ಮಾತ್ರ ಕೃಷಿ ಮಾಡಲಾಗಿದೆ.

ವೀರಾಜಪೇಟೆ: ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ತಾಲೂಕು ವೀರಾಜಪೇಟೆ. ಒಂದು ರೀತಿಯಲ್ಲಿ ಕೊಡಗಿನ ಭತ್ತದ ಕಣಜ ಎಂದೇ ಕರೆಯಲಾಗುವ ಈ ತಾಲೂಕಿನಲ್ಲಿ ಪ್ರಸಕ್ತ ವರ್ಷ ಮುಂಗಾರಿನ ನಡುವೆ ಕೆಲವೆಡೆ ಆಶಾದಾಯಕ ಮಳೆಯಾದರೂ, ಬಳಿಕ ವ್ಯತ್ಯಾಸ ಉಂಟಾಗಿದೆ. ಪರಿಣಾಮವಾಗಿ ಇದುವರೆಗೆ ಕೇವಲ 142 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ನಡೆದಿದ್ದು, 590 ಹೆಕ್ಟೇರ್ ನಲ್ಲಿ ಸಸಿ ಮಡಿ ಸಿದ್ಧವಾಗಿದೆ.

ಸೋಮವಾರಪೇಟೆ: ಸೋಮವಾರಪೇಟೆ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಭತ್ತದ ಕೃಷಿಯೊಂದಿಗೆ, 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ. ಆದರೆ ಈ ತಾಲೂಕಿನಲ್ಲಿ 6690 ಹೆಕ್ಟೇರ್ ಗೆ ಆಗುವಷ್ಟು ಮಾತ್ರ ಸಸಿಮಡಿ ಸಿದ್ಧವಾಗಿದ್ದು, ಇದುವರೆಗೆ 480 ಹೆಕ್ಟೇರ್‍ನಲ್ಲಿ ಮಾತ್ರ ನಾಟಿ ಕಾರ್ಯ ಮುಗಿದಿದೆ. ಆದರೆ 4 ಸಾವಿರ ಹೆಕ್ಟೇರ್ ಪ್ರದೇಶದ ಮುಸುಕಿನ ಜೋಳ ಬೆಳೆಯುವ ಗುರಿಯಲ್ಲಿ ಇದುವರೆಗೆ 2,830 ಹೆಕ್ಟೇರ್ ಪ್ರಗತಿ ಸಾಧಿಸಲಾಗಿದೆ.

ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿ ನದಿಗಳು ಉಕ್ಕಿ ಹರಿಯುವ ಪ್ರದೇಶದ ಗದ್ದೆಗಳಲ್ಲಿ ಮಳೆ ಕಡಿಮೆಯಾಗುವ ಆಗಸ್ಟ್ ತಿಂಗಳಿನಲ್ಲಿ ಭತ್ತದ ನಾಟಿ ಮಾಡುವುದು ವಾಡಿಕೆಯಾದರೂ, ಈ ಬಾರಿ ಮಳೆಯ ಪ್ರಮಾಣವೇ ಕಡಿಮೆಯಿರುವುದರಿಂದ ಈ ಗದ್ದೆಗಳಲ್ಲಿ ನಾಟಿ ನಡೆಯುವ ಸಾಧ್ಯತೆ ಕಡಿಮೆ ಇರುವುದಾಗಿ ಹೇಳಲಾಗುತ್ತಿದೆ. ಅಲ್ಲದೆ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಹಲವಾರು ರೈತರು ಕೃಷಿ ಮಾಡುವ ಯೋಚನೆಯನ್ನೇ ಬಿಟ್ಟಿದ್ದಾರೆ ಎನ್ನಲಾಗಿದೆ.

ಮಳೆಯೇ ಇಲ್ಲ
ವಾಡಿಕೆಯಂತೆ ಕೊಡಗು ಜಿಲ್ಲೆಯಲ್ಲಿ ಈ ವೇಳೆಗೆ ಸರಾಸರಿ 70 ಇಂಚು ಮಳೆಯಾಗಬೇಕಿತ್ತು. ಆದರೆ ಈ ಬಾರಿ ಜುಲೈ ಅಂತ್ಯದವರೆಗೆ ಕೇವಲ 37.48 ಇಂಚು ಸರಾಸರಿ ಮಳೆಯಾಗಿದ್ದು, ಶೇ. 45.7 ರಷ್ಟು ಮಳೆ ಕೊರತೆ ಕಂಡು ಬಂದಿದೆ. 2017ರಲ್ಲಿ ಈ ಅವಧಿಗೆ 48.84 ಇಂಚು ಮಳೆಯಾದರೆ ಕಳೆದ ವರ್ಷ 94.18 ಇಂಚು ದಾಖಲಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ವಾಡಿಕೆಯಂತೆ ಈ ಅವಧಿಗೆ 99.74 ಇಂಚು ಸರಾಸರಿ ಮಳೆಯಾಗಬೇಕಿದ್ದು, ಪ್ರಸಕ್ತ 49.06 ಇಂಚು ಮಾತ್ರ ದಾಖಲಾಗಿದೆ. 2017ರಲ್ಲಿ ಈ ಅವಧಿಗೆ 64.18 ಇಂಚು ಹಾಗೂ ಕಳೆದ ವರ್ಷ 128 ಇಂಚು ಮಳೆಯಾಗಿತ್ತು.

ಅತ್ತ ಸೋಮವಾರಪೇಟೆ ತಾಲೂಕಿನಲ್ಲೂ ವಾಡಿಕೆಯಂತೆ ಈ ಅವಧಿಯಲ್ಲಿ 49.16 ಇಂಚು ಮಳೆಯಾಗಬೇಕಿದ್ದು, ಪ್ರಸಕ್ತ ಕೇವಲ 23.72 ಇಂಚು ದಾಖಲಾಗಿದೆ. 2017ರಲ್ಲಿ ಈ ಅವಧಿಗೆ 40.59 ಇಂಚು ಹಾಗೂ ಕಳೆದ ವರ್ಷ 73.29 ಇಂಚು ಸರಾಸರಿ ಮಳೆಯಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ   ವಾಡಿಕೆಯಂತೆ 58.68 ಇಂಚು ಮಳೆಯಾಗಬೇಕಿದ್ದು, ಪ್ರಸಕ್ತ ವರ್ಷದಲ್ಲಿ 38.66 ಇಂಚು ದಾಖಲಾಗಿದೆ. ಈ ತಾಲೂಕಿನಲ್ಲಿ 2017ರಲ್ಲಿ ಈ ಅವಧಿಗೆ 41.86 ಇಂಚು ಹಾಗೂ 2018ರಲ್ಲಿ 91.02 ಇಂಚು ಮಳೆಯಾಗಿತ್ತು.

ಭತ್ತದ ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ರೈತರು ವರ್ಷದಿಂದ ವರ್ಷಕ್ಕೆ ಗದ್ದೆಗಳನ್ನು ಪಾಳು ಬಿಡುತ್ತಿದ್ದಾರೆ. ಈ ನಡುವೆ  ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ 8 ಗ್ರಾ.ಪಂ. ವ್ಯಾಪ್ತಿಯ 50ಕ್ಕೂ ಅಧಿಕ ಗ್ರಾಮಗಳಲ್ಲಿ ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ಭತ್ತದ ಗದ್ದೆಗಳಲ್ಲಿ ಹೂಳು ತುಂಬಿ ಪಾಳು ಬಿದ್ದಿವೆ. ಸಕಾಲದಲ್ಲಿ ಮಳೆ ಬಾರದೆ ಬೇರೆ ಸಮಯದಲ್ಲಿ ಬಂದರೆ ಏನು ಪ್ರಯೋಜನವೆಂದು ಕೃಷಿಕ ವರ್ಗ ಬೇಸರ ವ್ಯಕ್ತಪಡಿಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News