ರಾಣಿ ಚನ್ನಮ್ಮ ವಿವಿ ಯು.ಜಿ ಪಠ್ಯಕ್ರಮದಲ್ಲಿ ಸಿಬಿಸಿಎಸ್ ಪದ್ಧತಿ ಅಳವಡಿಕೆ: ಕುಲಪತಿ ಪ್ರೊ.ರಾಮಚಂದ್ರಗೌಡ

Update: 2019-08-03 16:46 GMT

ಬೆಳಗಾವಿ, ಆ.2: ರಾಷ್ಟ್ರೀಯ ಶಿಕ್ಷಣ ನೀತಿ-2019ರ ಅನುಗುಣವಾಗಿ ಯು.ಜಿ ಪಠ್ಯಕ್ರಮದಲ್ಲಿ ಸಿಬಿಸಿಎಸ್ ಪದ್ಧತಿಯನ್ನು 2020-21ನೇ ಸಾಲಿನಿಂದ ಆರಂಭಿಸಲಾಗುವುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರಗೌಡ ತಿಳಿಸಿದ್ದಾರೆ.

ನಗರದ ವಾರ್ತಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಎಲ್ಲ ಮೂಲಭೂತ ಸೌಕರ್ಯಗಳು ದೊರಕಿದ್ದೇ ಆದರೆ ದೇಶದ ಉತ್ತಮ ವಿಶ್ವವಿದ್ಯಾಲಯಗಳಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಒಂದಾಗಿ ಮಾಡುತ್ತೇನೆ ಎಂದರು.

ವಿಶ್ವವಿದ್ಯಾಲಯದ ಎಲ್ಲ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಈಗಾಗಲೇ ಸಿಬಿಸಿಎಸ್ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗಿದೆ. ಸಿಬಿಸಿಎಸ್ ಪಠ್ಯಕ್ರಮದಿಂದ ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣವನ್ನು ಈ ಭಾಗದ ಜನತೆಗೆ ಒದಗಿದಂತಾಗುವುದು. ಅದಕ್ಕಾಗಿ ವಿಶ್ವವಿದ್ಯಾಲಯವು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುವಂತೆ ಶಿಕ್ಷಣವನ್ನು ನೀಡುವುದಾಗಿ ಹೇಳಿದ ಅವರು, ವಿವಿಯಲ್ಲಿ 19 ಸ್ನಾತಕೋತ್ತರ ಕೋರ್ಸ್‌ಗಳಿದ್ದು, ಈ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಕೋರ್ಸ್‌ಗಳಿಗಾಗಿ ಬೇರೆ ಬೇರೆ ವಿವಿಗಳಿಗೆ ಹೋಗುತ್ತಿದ್ದಾರೆ. ಹಾಗಾಗಿ ಮುಂಬರುವ 2020-21ನೇ ಸಾಲಿನಿಂದ ಹೆಚ್ಚಿನ ಕೋರ್ಸ್‌ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.

ರಾಣಿ ಚನ್ನಮ್ಮ ವಿವಿಯು ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಂತೆ ಇರುವ 168.76 ಎಕರೆ ಪ್ರದೇಶವು ವಿಶ್ವವಿದ್ಯಾಲಯಕ್ಕೆ ಈವರೆಗೂ ಹಸ್ತಾಂತರವಾಗದೇ ಇರುವುದು ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ತೊಡಕನ್ನುಂಟುಮಾಡಿದೆ ಎಂದು ರಾಮಚಂದ್ರಗೌಡ ಹೇಳಿದರು.

ವಿವಿಯು ವಿಜಯಪುರ, ಬಾಗಲಕೋಟೆ ಮತ್ತು ಜಮಖಂಡಿಗಳಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ತೆರೆದಿದ್ದು, ಅವಶ್ಯಕತೆಗಳಿಗನುಗುಣವಾಗಿ ಹೆಚ್ಚಿನ ಅಧ್ಯಯನ ವಿಭಾಗಗಳನ್ನು ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.

ವಿಜಯಪುರದಲ್ಲಿ 31 ಎಕರೆ, ಜಮಖಂಡಿಯಲ್ಲಿ 72 ಎಕರೆ ಹಾಗೂ ಬಾಗಲಕೋಟೆಯಲ್ಲಿ ಜಮೀನು ಪಡೆದುಕೊಳ್ಳುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಎರಡನೇ ಹಂತದ ಕಟ್ಟಡವು 4.80 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಯು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಮೂರನೇ ಹಂತದ ಕಾಮಗಾರಿಗೆ 10 ಕೋಟಿ ರೂ.ಅನುಮೋದನೆ ದೊರಕಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವುದಾಗಿ ರಾಮಚಂದ್ರಗೌಡ ಹೇಳಿದರು.

ಈ ಸಂದರ್ಭದಲ್ಲಿ ವಿವಿಯ ಮೌಲ್ಯಮಾಪನ ಕುಲಪತಿ ಪ್ರೊ.ರಂಗರಾಜ ವನದುರ್ಗ, ಕುಲಸಚಿವ ಬಸವರಾಜ ಪದ್ಮಶಾಲಿ, ಹಣಕಾಸು ಅಧಿಕಾರಿ ಶಂಕರಾನಂದ ಬನಶಂಕರಿ, ಡಾ.ಚಂದ್ರಶೇಖರ ವಾಗ್ಮರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News