ಗಣೇಶ ಹಬ್ಬ ಹಿನ್ನೆಲೆ: ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಮನವಿ

Update: 2019-08-24 17:25 GMT

ಬೆಂಗಳೂರು, ಆ.24: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ಸಂಭವಿಸುವ ಅಗ್ನಿದುರಂತ ತಡೆಗಟ್ಟಲು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಪೆಂಡಾಲ್‌ನ ಜಿಂಕ್ ಶೀಟ್ ಅಥವಾ ಇತರೆ ಅಗ್ನಿ ನಿರೋಧಕ ವಸ್ತುಗಳನ್ನು ಬಳಸಿ ನಿರ್ಮಿಸಬೇಕು. ಪೆಂಡಾಲ್‌ಗಳನ್ನು ರಸ್ತೆಗಳಲ್ಲಿ ನಿರ್ಮಿಸುವುದನ್ನು ತಪ್ಪಿಸಬೇಕು. ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಪೆಂಡಾಲ್‌ಗಳನ್ನು ತಲುಪಲು ಸೂಕ್ತ ರಸ್ತೆಯನ್ನು ವ್ಯವಸ್ಥೆ ಮಾಡಬೇಕು. ಪ್ರತಿಯೊಂದು ಪೆಂಡಾಲ್‌ಗೆ ಮುಂದಿನಿಂದ ಹಾಗೂ ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ದುರಂತ ಸಂದರ್ಭದಲ್ಲಿ ಪರಿಸ್ಥಿತಿಗನುಗುಣವಾಗಿ ರಕ್ಷಣಾ ಕಾರ್ಯಕರ್ತರು ಪೆಂಡಾಲ್‌ಗೆ ಪ್ರವೇಶಿಸಿ ಒಳಗಿದ್ದವರನ್ನು ರಕ್ಷಿಸಬಹುದಾಗಿದೆ ಎಂದು ತಿಳಿಸಿದೆ.

ವಿದ್ಯುತ್ ಸಂಪರ್ಕವನ್ನು ನುರಿತ ಕೆಲಸಗಾರರ ಮೂಲಕ ಕಲ್ಪಿಸತಕ್ಕದ್ದು ಹಾಗೂ ತೆರೆದ ವೈರ್‌ಗಳನ್ನು ಅಳವಡಿಸಬಾರದು. ಪ್ರತಿಯೊಂದು ಪೆಂಡಾಲ್‌ನಲ್ಲಿ 5 ಕೆ.ಜಿ ಸಾಮರ್ಥ್ಯದ ಅಗ್ನಿನಂದಕ, ಒಂದು 9 ಲೀಟರ್ ಸಾಮರ್ಥ್ಯದ ಪ್ರೇಜರ್ ಮಾದರಿ ಅಗ್ನಿನಂದಕ ಮತ್ತು 2 ಬಕೆಟುಗಳಲ್ಲಿ ಮರಳು ಹಾಗೂ ಎರಡು ಬಕೆಟುಗಳಲ್ಲಿ ನೀರನ್ನು ಇಟ್ಟಿರಬೇಕು.

ಪ್ರತಿ ಪೆಂಡಾಲ್‌ನ ಪಕ್ಕದಲ್ಲಿ ಎರಡು ಡ್ರಮ್‌ನಲ್ಲಿ ಕನಿಷ್ಠ 400 ಲೀ. ನೀರನ್ನು ಶೇಖರಣೆ, ಪೆಂಡಾಲ್‌ನಲ್ಲಿ ಅಡುಗೆ ಅಥವಾ ಧೂಮಪಾನಕ್ಕೆ ಅವಕಾಶ ನೀಡಬಾರದು. ಸಂಬಂಧಿತ ಸೂಚನಾ ಫಲಕವನ್ನು ಪೆಂಡಾಲ್‌ನ ಹೊರ ಭಾಗದ ಎಲ್ಲ ದಿಕ್ಕುಗಳಲ್ಲಿ ಹಾಕಿರಬೇಕು. ಜನಸಂದಣಿ ಪ್ರದೇಶಗಳಲ್ಲಿ ಹಾಕಲಾಗಿರುವ ಪೆಂಡಾಲ್‌ಗಳ ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಬಾರದು. ಪೆಂಡಾಲ್‌ಗಳಲ್ಲಿ ಯಾವುದೇ ರೀತಿಯ ಹೊತ್ತಿ ಉರಿಯುವ ಸಾಮಗ್ರಿಗಳನ್ನು ಶೇಖರಿಸಿಡಬಾರದು. ಪ್ರತಿ ಪೆಂಡಾಲ್‌ನಲ್ಲಿ ಅಗ್ನಿಶಾಮಕ ಇಲಾಖೆಯ ದೂರವಾಣಿ ಸಂಖ್ಯೆ 101 ಹಾಗೂ ಸ್ಥಳೀಯ ಪೊಲೀಸ್ ಕಂಟ್ರೋಲ್ ದೂರವಾಣಿ ಸಂಖ್ಯೆ 100ನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸತಕ್ಕದ್ದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News