ಬಿಜೆಪಿಯ ಸ್ಟಾರ್ ಪ್ರಚಾರಕ ಆತ್ಮಹತ್ಯೆ: ಎನ್ ಆರ್ ಸಿಯಲ್ಲಿ ಹೊರಗುಳಿಯುವ ಭಯ ಕಾರಣ?
ಹನುಮಂತನ ವೇಷ ಧರಿಸಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಿದ್ದ ನಿಬಾಶ್ ಸರ್ಕಾರ್ ಅವರ ಫೋಟೊಗಳು ಲೋಕಸಭಾ ಚುನಾವಣೆ ಸಂದರ್ಭ ವೈರಲ್ ಆಗಿತ್ತು. ಇದೀಗ ಇದೇ ನಿಬಾಶ್ ಸರ್ಕಾರ್ ಅವರು ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಯಾಗಿದೆ. ಎನ್ ಆರ್ ಸಿ ಪಟ್ಟಿಯಿಂದ ಹೊರಗುಳಿಯುವ ಭಯದಿಂದ ಅವರು ಆತ್ಮಹತ್ಯೆಗೈದಿರುವುದಾಗಿ ಆರೋಪಿಸಲಾಗಿದೆ.
ಎನ್ ಆರ್ ಸಿಯನ್ನು ಇಡೀ ದೇಶದಲ್ಲಿ ಜಾರಿಗೆ ತರಲಾಗುವುದು ಮತ್ತು ಅಕ್ರಮ ವಲಸಿಗರನ್ನು ಹೊರದಬ್ಬಲಾಗುವುದು ಎಂದು ಇತ್ತೀಚೆಗಷ್ಟೇ ಕೊಲ್ಕತ್ತಾಗೆ ಭೇಟಿ ನೀಡಿದ್ದಾಗ ಅಮಿತ್ ಶಾ ಹೇಳಿದ್ದರು.
2019ರ ಚುನಾವಣೆಯಲ್ಲಿ ನಿಬಾಶ್ ಸರ್ಕಾರ್ ರನಘಾಟ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜಗನ್ನಾಥ್ ಸರ್ಕಾರ್ ಪರ ಭಾರೀ ಪ್ರಚಾರ ನಡೆಸಿದ್ದರು. ಅವರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಿಬಾಶ್ ಆತ್ಮಹತ್ಯೆಗೆ ಎನ್ ಆರ್ ಸಿ ಭಯ ಕಾರಣವಲ್ಲ ಎಂದು ಕುಟುಂಬಸ್ಥರು ಹೇಳಿದರೂ, ಈ ಬಗ್ಗೆ ಮಾತನಾಡುವ ನಿಬಾಶ್ ರ ನೆರೆಮನೆಯವರು, “ನೋಡಿ ಇವರೆಲ್ಲಾ ಬಾಂಗ್ಲಾದಿಂದ ಇಲ್ಲಿಗೆ ವಲಸೆ ಬಂದವರು, ಅಸ್ಸಾಂನಲ್ಲಿ 12 ಲಕ್ಷ ಹಿಂದೂಗಳನ್ನು ಹೊರಗೆಸೆಯಲ್ಪಟ್ಟ ಎನ್ ಆರ್ ಸಿ ಎಂಬ ಶಬ್ಧವನ್ನು ಕೇಳಿದರೇ ಇವರು ಭಯ ಬೀಳುತ್ತಾರೆ. ಆದರೆ ಅವರೇನು ಮಾಡುವುದು?, ಅವರಿಗೆ ಯಾವುದೇ ದಾಖಲೆಗಳಿಲ್ಲ. ನಿಬಾಶ್ ಗೂ ಇರಲಿಲ್ಲ. ನಾನು ಇಲ್ಲೇ ಹುಟ್ಟಿದವನು. ನಾನು ಇಲ್ಲೇ ಬೆಳೆದವನು. ನನಗೆ ಇಲ್ಲಿ ಎಲ್ಲರ ಪರಿಚಯವೂ ಇದೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ಜಗನ್ನಾಥ್ ಸರ್ಕಾರ್ ಕೂಡ ವಲಸಿಗ’ ಎಂದು ಹೇಳುತ್ತಾರೆ.