ಪ್ರಧಾನಿಗೆ ಪತ್ರ ಬರೆಯುವುದು ದೇಶದ್ರೋಹವೇ: ಸ್ಟಾಲಿನ್ ಪ್ರಶ್ನೆ
ಚೆನ್ನೈ, ಅ.5: ಕೋಮು ಸಾಮರಸ್ಯ ಮತ್ತು ಸಹಿಷ್ಣುತೆ ಎತ್ತಿಹಿಡಿಯಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದರೆ ದೇಶದ್ರೋಹ ಹೇಗಾಗುತ್ತದೆ ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಗುಂಪು ದಾಳಿ ಮತ್ತು ಹತ್ಯೆ ಪ್ರಕರಣಗಳ ಬಗ್ಗೆ ಆತಂಕ ಸೂಚಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿರುವ 49 ಗಣ್ಯ ವ್ಯಕ್ತಿಗಳ ವಿರುದ್ಧ ಬಿಹಾರದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದನ್ನು ಸ್ಟಾಲಿನ್ ಖಂಡಿಸಿದ್ದಾರೆ. ಎಫ್ಐಆರ್ ದಾಖಲಾಗಿರುವವರಲ್ಲಿ ಖ್ಯಾತ ಸಿನೆಮ ನಿರ್ದೇಶಕ ಮಣಿರತ್ನಮ್, ಚಿತ್ರನಟಿ ರೇವತಿ, ಇತಿಹಾಸಜ್ಞ ರಾಮಚಂದ್ರ ಗುಹಾ ಸೇರಿದ್ದಾರೆ.
ಗುಹಾ, ರೇವತಿ, ಮಣಿರತ್ನಂರಂತಹ ವ್ಯಕ್ತಿಗಳಿಗೆ ದೇಶದ್ರೋಹಿಗಳೆಂದು ಹಣೆಪಟ್ಟಿ ಕಟ್ಟುವುದನ್ನು ಒಪ್ಪಲಾಗದು. ಈ ರೀತಿಯ ಘಟನೆ ಜನತೆಯ ಮನದಲ್ಲಿ ಭೀತಿ ಮೂಡಿಸುತ್ತದೆ ಹಾಗೂ ತಾವು ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿರುವ ಬಗ್ಗೆ ಅವರಲ್ಲಿ ಸಂಶಯ ಹುಟ್ಟಲು ಕಾರಣವಾಗುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ.