ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು

Update: 2019-10-13 18:12 GMT
ಸಾಂದರ್ಭಿಕ ಚಿತ್ರ

ಮಂಡ್ಯ, ಅ.13: ಶಿಂಷಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಮುಳುಗಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕು ಹುಳಗನಹಳ್ಳಿ ಗ್ರಾಮದಲ್ಲಿ ನಡೆದಿದೆ. 

ನವೀನ್(15) ಹಾಗು ಮನು(10) ಸಾವನ್ನಪ್ಪಿದ ಬಾಲಕರು. ಇವರು ಶನಿವಾರ ಸಂಜೆ ಗ್ರಾಮದ ಪಕ್ಕದಲ್ಲಿರುವ ನದಿಯಲ್ಲಿ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ.

ನವೀನ್ ನಾಗಮಂಗಲ ತಾಲೂಕಿನವನಾಗಿದ್ದು, ಶಾಲೆಗೆ ರಜೆಯಿದ್ದ ಕಾರಣ ಹುಳುಗನಹಳ್ಳಿಯ ದೊಡ್ಡಮ್ಮನ ಮನೆಗೆ ಬಂದಿದ್ದ. ಈತ ಮತ್ತು ದೊಡ್ಡಮ್ಮನ ಇಬ್ಬರು ಮಕ್ಕಳು ಈಜಲು ಹೋಗಿದ್ದರು. ಈಜು ಬಾರದೆ ಮನು, ನವೀನ್ ಮುಳುಗಿದ್ದಾರೆ. ಇದನ್ನು ಕಂಡು ಭಯಗೊಂಡ ಮನು ಅಣ್ಣ ಅಲ್ಲಿಂದ ಪರಾರಿಯಾಗಿದ್ದಾನೆ. ಸಂಜೆಯಾದರೂ ಬಾಲಕರು ಮನೆಗೆ ಬಾರದಿದ್ದಾಗ ಪೋಷಕರು ಗಾಬರಿಗೊಂಡಿದ್ದರು.

ಓರ್ವ ಬಾಲಕ ನದಿ ಕಡೆಯಿಂದ ಗ್ರಾಮದ ಕಡೆಗೆ ಓಡಿ ಹೋಗುತ್ತಿರುವುದನ್ನು ಗಮನಿಸಿದ್ದ ಜಮೀನಿನ ಬಳಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರೊಬ್ಬರು ಬಾಲಕರ ಪೋಷಕರಿಗೆ ವಿಷಯ ತಿಳಿಸಿದ್ದಾರೆ.

ತಕ್ಷಣ ಪೋಷಕರು ಮತ್ತು ಗ್ರಾಮಸ್ಥರು ನದಿ ಬಳಿ ಹೋಗಿ ನೋಡಿದಾಗ ಮಕ್ಕಳ ಬಟ್ಟೆಗಳು ದಡದಲ್ಲಿ ಕಂಡು ಬಂದಿವೆ. ರಾತ್ರಿಯೆಲ್ಲಾ ಕಾರ್ಯಾಚರಣೆ ನಡೆಸಿ ರವಿವಾರ ಬೆಳಗ್ಗೆ ಇಬ್ಬರು ಬಾಲಕರ ಶವಗಳು ಪತ್ತೆಯಾದವು.

ನದಿ ಬಳಿಯಿಂದ ಭಯಗೊಂಡು ಊರುಬಿಟ್ಟು ಓಡಿ ಹೋಗಿದ್ದ ಮತ್ತೊಬ್ಬ ಬಾಲಕನ ದೂರವಾಣಿಗೆ ಕರೆಮಾಡಿದಾಗ, ಆತ ಇಬ್ಬರು ನೀರಿನಲ್ಲಿ ಮುಳುಗಿಬಿಟ್ಟರು. ನಾನು ಹೆದರಿಕೊಂಡು ಓಡಿ ಹೋಗಿದ್ದೇನೆ ಎಂದು ಹೇಳಿದ ಎನ್ನಲಾಗಿದೆ.

ನದಿಯಿಂದ ಹೊರತೆಗೆದ ಬಾಲಕರ ಮೃತ ದೇಹವನ್ನು ನೋಡಿದ ಪೋಷಕರ ರೋದನ ಮುಗಿಲು ಮುಟ್ಟಿತ್ತು. ಮದ್ದೂರು ಸರಕಾರಿ ಆಸ್ಪತ್ರೆಯಲ್ಲಿ ಮೃತರ ದೇಹಗಳ ಶವ ಪರೀಕ್ಷೆ ನಡೆಸಲಾಯಿತು.

ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News