ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನಿವೃತ್ತಿ
ಹೊಸದಿಲ್ಲಿ, ನ. 18: ದಶಕಗಳ ಹಳೆಯ ರಾಜಕೀಯ ಹಾಗೂ ಧಾರ್ಮಿಕ ಸೂಕ್ಷ್ಮದ ಅಯೋಧ್ಯೆ ಭೂ ವಿವಾದಕ್ಕೆ ತೆರೆ ಎಳೆದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ರವಿವಾರ ನಿವೃತ್ತರಾದರು.
ಗೊಗೊಯಿ ಅವರು ನ್ಯಾಯಮೂರ್ತಿ ಹಾಗೂ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ನಿರ್ವಹಿಸಿದ ಅವಧಿಯಲ್ಲಿ ಕೆಲವು ವಿವಾದ ಹಾಗೂ ವೈಯಕ್ತಿಕ ಆರೋಪಕ್ಕೆ ಒಳಗಾಗಿದ್ದರು.
1950ರಲ್ಲಿ ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂದಿರುವುದಕ್ಕಿಂತಲೂ ಹಿಂದಿನ ಅಯೋಧ್ಯೆ ಭೂ ವಿವಾದಕ್ಕೆ ನವಂಬರ್ 9ರಂದು ಅಂತ್ಯ ಹಾಡಿದ ಐವರು ಸದಸ್ಯರ ನ್ಯಾಯಪೀಠದ ನೇತೃತ್ವ ವಹಿಸಿದ್ದ ಗೊಗೊಯಿ ಇತಿಹಾಸದಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.
ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯಾಚರಣೆಯ ರೀತಿ ಪ್ರಶ್ನಿಸಿ ಕಳೆದ ವರ್ಷ ಜನವರಿಯಲ್ಲಿ ನಾಲ್ವರು ಹಿರಿಯ ನ್ಯಾಯಾಧೀಶರು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಗೊಗೊಯಿ ಪಾಲ್ಗೊಂಡಿರುವುದು ಕೂಡ ಚರಿತ್ರೆಯಲ್ಲಿ ದಾಖಲಾಗಲಿದೆ.
ಗೊಗೊಯಿ ಅವರ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರನ್ನು ಹಲವು ವಿವಾದ ಸುತ್ತಿಕೊಂಡಿತ್ತು. ಅದರಲ್ಲೊಂದು ಮಹಿಳೆಯ ಲೈಂಗಿಕ ಕಿರುಕುಳದ ಆರೋಪ.