ಅಧಿಕಾರ ಬರುತ್ತೆ, ಹೋಗುತ್ತೆ; ಸಂಬಂಧವಷ್ಟೇ ಉಳಿಯುತ್ತದೆ: ಸುಪ್ರಿಯಾ ಸುಲೆ
ಮುಂಬೈ, ನ.24: ಅಧಿಕಾರ ಬರುತ್ತೆ, ಹೋಗುತ್ತೆ. ಆದರೆ ಸಂಬಂಧ ಮಾತ್ರ ಉಳಿದುಕೊಳ್ಳುತ್ತದೆ ಎಂದು ಎನ್ಸಿಪಿ ನಾಯಕಿ, ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ವಾಟ್ಸಾಪ್ ಸಂದೇಶದಲ್ಲಿ ಹೇಳಿದ್ದಾರೆ.
ಶನಿವಾರ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸೋದರ ಸಂಬಂಧಿ ಅಜಿತ್ ಪವಾರ್ ಅವರ ನಡೆಯ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡಿರುವ ಸುಪ್ರಿಯಾ, “ಬದುಕಿನಲ್ಲಿ ಯಾರ ಬಗ್ಗೆ ವಿಶ್ವಾಸ ಇರಿಸಿಕೊಂಡಿದ್ದೆನೋ ಅವರೇ ಮೋಸ ಮಾಡಿದ್ದಾರೆ. ಅವರನ್ನು ಸಮರ್ಥಿಸಿದ್ದೆ, ಅವರ ಬಗ್ಗೆ ಅಕ್ಕರೆಯಿತ್ತು. ಆದರೆ ಈಗ ಪಕ್ಷದ ಜೊತೆಗೆ ಕುಟುಂಬವೂ ಒಡೆದು ಹೋಗಿದೆ” ಎಂದಿದ್ದಾರೆ.
ಗುಡ್ ಮಾರ್ನಿಂಗ್. ಮೌಲ್ಯಗಳು ಅಂತಿಮವಾಗಿ ಗೆಲ್ಲುತ್ತವೆ. ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮ ಎಂದಿಗೂ ವ್ಯರ್ಥವಾಗದು. ಆ ದಾರಿ ಕಠಿಣವಾದರೂ ದೀರ್ಘಾವಧಿಯವರೆಗೆ ಉಳಿಯುತ್ತದೆ ಎಂದು ಮತ್ತೊಂದು ಸಂದೇಶದಲ್ಲಿ ಹೇಳಿದ್ದಾರೆ. ಈ ಮಧ್ಯೆ, ರವಿವಾರ ರಾಜ್ಯಪಾಲ ಭಗತ್ಸಿಂಗ್ ಕೋಶ್ಯಾರಿಯವರನ್ನು ಭೇಟಿ ಮಾಡಿದ ಎನ್ಸಿಪಿ ಮುಖಂಡ ಜಯಂತ್ ಪಾಟೀಲ್, ಶಾಸಕಾಂಗ ನಾಯಕರ ಹುದ್ದೆಯಿಂದ ಅಜಿತ್ ಪವಾರ್ರನ್ನು ವಜಾಗೊಳಿಸಿ ತನ್ನನ್ನು(ಜಯಂತ್ ಪಾಟೀಲ್) ನೇಮಿಸಿರುವ ಆದೇಶ ಪತ್ರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದ್ದಾರೆ.