ಅಣ್ಣನಿಗೆ ಭರ್ಜರಿ ಸ್ವಾಗತ ನೀಡಿದ ತಂಗಿ ..!
ಮುಂಬೈ, ನ.27: ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಮಹಾರಾಷ್ಟ್ರದ ಹೊಸ ಶಾಸಕರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಮಾಜಿ ಉಪಮುಖ್ಯಮಂತ್ರಿ ಹಾಗೂ ತನ್ನ ದೊಡ್ಡಪ್ಪನ ಮಗ ಅಜಿತ್ ಪವಾರ್ ಅವರನ್ನು ಆಲಂಗಿಸಿಕೊಂಡು ಬುಧವಾರ ಭರ್ಜರಿ ಸ್ವಾಗತ ನೀಡಿದರು.
ಕ್ಯಾಮರಾಗಳು ಈ ಕ್ಷಣವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದಂತೆ, ಸುಳೆ ಅವರು ದಾದಾ(ಅಣ್ಣ) ನೊಂದಿಗೆ ಅಣ್ಣ ಯಾವುದೇ ಬಿರುಕು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಜಿತ್ ಪವಾರ್ ಬಿಜೆಪಿಯೊಂದಿಗೆ ರಾತ್ರೋರಾತ್ರಿ ಕೈ ಜೋಡಿಸಿ ಉಪಮುಖ್ಯ ಮಂತ್ರಿಯಾಗುವ ಮೂಲಕ ಎನ್ಸಿಪಿಗೆ ಆಘಾತ ನೀಡಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಳೆ , “ನಾನು (ದಾದಾ) ಅಜಿತ್ ಪವಾರ್ ಅವರೊಂದಿಗೆ ಎಂದಿಗೂ ಬಿರುಕು ಹೊಂದಿಲ್ಲ ... ಪಕ್ಷದಲ್ಲಿ ಎಲ್ಲರಿಗೂ ಪಾತ್ರವಿದೆ ... ಪಕ್ಷವನ್ನು ಮುಂದೆ ಕೊಂಡೊಯ್ಯುವುದು ಅವರ ಕರ್ತವ್ಯ” ಎಂದು ಹೇಳಿದರು.
ಮಂಗಳವಾರ ಅಜಿತ್ ಪವಾರ್ ಉಪಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಫಡ್ನವೀಸ್ ರಾಜೀನಾಮೆ ನೀಡಿದ್ದರು. ಬಳಿಕ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಕೂಟ ಉದ್ಧವ್ ಠಾಕ್ರೆ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು.
ಆದರೆ ಅಜಿತ್ ಪವಾರ್ ಬಗ್ಗೆ ಸುಳೆ ಅವರ ಮೃದು ನಿಲುವು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿತ್ತು.