ಉದ್ಧವ್ ಠಾಕ್ರೆಯನ್ನು ಟೀಕಿಸಿದ ಯುವಕನಿಗೆ ಥಳಿಸಿ ತಲೆ ಬೋಳಿಸಿದ ದುಷ್ಕರ್ಮಿಗಳು

Update: 2019-12-23 15:02 GMT

ಮುಂಬೈ,ಡಿ.23: ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳ ವಿರುದ್ಧ ಡಿ.15ರ ಪೊಲೀಸ್ ಕ್ರಮವನ್ನು ಕೇಂದ್ರವಾಗಿಟ್ಟುಕೊಂಡು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಫೇಸ್‌ ಬುಕ್ ‌ನಲ್ಲಿ ಅವಮಾನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದ ಇಲ್ಲಿನ ವಡಾಲಾ ನಿವಾಸಿಗೆ ಶಿವಸೇನೆ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಥಳಿತಕ್ಕಾಗಿರುವ ವ್ಯಕ್ತಿಯನ್ನು ಹೀರಾಮಣಿ ತಿವಾರಿ (30) ಎಂದು ಗುರುತಿಸಲಾಗಿದ್ದು,ಆತ ‘ ರಾಹುಲ್ ತಿವಾರಿ’ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಡಿ.19ರಂದು ಈ ಅವಮಾನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದ ಎಂದು ಅಧಿಕಾರಿಯೋರ್ವರು ತಿಳಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತಿದ್ದ ಜಾಮಿಯಾ ವಿದ್ಯಾರ್ಥಿಗಳ ವಿರುದ್ಧದ ಪೊಲೀಸ್ ಕಾರ್ಯಾಚರಣೆಯನ್ನು 1919ರ ಜಲಿಯನ್ ವಾಲಾ ಬಾಗ್ ನರಮೇಧಕ್ಕೆ ಹೋಲಿಸಿದ್ದಕ್ಕಾಗಿ ಠಾಕ್ರೆಯವರನ್ನು ಪೋಸ್ಟ್‌ನಲ್ಲಿ ನಿಂದಿಸಲಾಗಿತ್ತು.

ಕೆಲವರಿಂದ ಬೆದರಿಕೆಗಳು ಎದುರಾಗಿದ್ದ ಹಿನ್ನೆಲೆಯಲ್ಲಿ ತಿವಾರಿ ಈ ಪೋಸ್ಟ್‌ನ್ನು ಅಳಿಸಿದ್ದ. ಆದರೆ ರವಿವಾರ ಶಿವಸೇನೆ ಕಾರ್ಯಕರ್ತರ ಗುಂಪೊಂದು ತಿವಾರಿಯ ನಿವಾಸದ ಹೊರಗೆ ಆತನನ್ನು ಥಳಿಸಿದೆ ಮತ್ತು ತಲೆಯನ್ನು ಬೋಳಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News