ಸಿಎಎ, ಎನ್ ಆರ್ ಸಿ ವಿರುದ್ಧ ಧ್ವನಿಯೆತ್ತಿದ ಕೋಲ್ಕತಾದ ಬ್ರಾಹ್ಮಣ ಪುರೋಹಿತರು
ಕೋಲ್ಕತಾ ,ಡಿ.31: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಪ್ರಸ್ತಾವಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರುದ್ಧದ ಪ್ರತಿಭಟನೆಗೆ ಕೋಲ್ಕತಾದಲ್ಲಿ ಸೋಮವಾರ ಬಾಹ್ಮಣ ಪುರೋಹಿತರು ಸಾಥ್ ನೀಡಿದ್ದಾರೆ.
ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಧಾರ್ಮಿಕವಾಗಿ ದೇಶವನ್ನು ವಿಭಜಿಸುವ ಪ್ರಯತ್ನಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
'ಪಾಸ್ಚಿಮ್ ಬಂಗಾ ಸನಾತನ ಬ್ರಾಹ್ಮಿಣ್ ಟ್ರಸ್ಟ್' ನೇತೃತ್ವದಲ್ಲಿ 'ನೋ ಎನ್ ಆರ್ ಸಿ, ನೋ ಸಿಎಎ' ಪೋಸ್ಟರ್ ಗಳನ್ನು ಹಿಡಿದುಕೊಂಡು ನೂರಾರು ಮಂದಿ ಪುರೋಹಿತರು ನಗರದ ಮಧ್ಯ ಭಾಗದ ಮಾಯೊ ರಸ್ತೆಯಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯ ಬಳಿ ಜಮಾಯಿಸಿ ಘೋಷಣೆಗಳನ್ನು ಕೂಗಿದರು.
ಸಿಎಎ ಮತ್ತು ಎನ್ಆರ್ಸಿಯ ವಿಚಾರ ರಾಷ್ಟ್ರದಾದ್ಯಂತ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಸಿಎಎ ಮತ್ತು ಎನ್ಆರ್ಸಿಯನ್ನು ಬಳಸಿಕೊಂಡು ನಿರ್ದಿಷ್ಟ ಸಮುದಾಯವನ್ನು ಹೊರಗಿಡುವ ಪ್ರಯತ್ನಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಮಿಶ್ರಾ ಹೇಳಿದ್ದಾರೆ.