ಕೊರೋನದಿಂದ ಟ್ರಂಪ್ ಚೇತರಿಕೆಗಾಗಿ ಉಪವಾಸ ಕೈಗೊಂಡಿದ್ದ ತೆಲಂಗಾಣದ ರೈತ ಮೃತ
Update: 2020-10-12 05:55 GMT
ಮೆದಕ್(ತೆಲಂಗಾಣ): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್-19ನಿಂದಾಗಿ ಬೇಗನೆ ಚೇತರಿಸಿಕೊಳ್ಳಲಿ ಎಂದು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದು, ಉಪವಾಸ ಇದ್ದುಕೊಂಡು ಪ್ರಾರ್ಥನೆ ನಡೆಸುತ್ತಿದ್ದ ಬುಸ್ಸಾ ಕೃಷ್ಣ ರಾಜು ಹೆಸರಿನ ತೆಲಂಗಾಣದ ರೈತ ರವಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಟ್ರಂಪ್ ಕೊರೋನ ವೈರಸ್ ಸೋಂಕಿಗೆ ಒಳಗಾದ ಬಳಿಕ ರಾಜು ಆಘಾತಗೊಂಡಿದ್ದರು ಎಂದು ಅವರ ಸ್ನೇಹಿತರು ಹೇಳಿದ್ದಾರೆ.
"ರಾಜು ಅವರು ಟ್ರಂಪ್ ಅವರ ಕಟ್ಟಾ ಅಭಿಮಾನಿ. ಕಳೆದ ವರ್ಷ ಟ್ರಂಪ್ ಅವರ ಆರಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಿದ್ದ. ಅದಕ್ಕೆ ಪೂಜೆಯನ್ನು ಮಾಡುತ್ತಿದ್ದ. ಟ್ರಂಪ್ಗೆ ಕೊರೋನ ಸೋಂಕು ತಗಲಿದ ಬಳಿಕ ತುಂಬಾ ಬೇಸರಗೊಂಡಿದ್ದ. ಕಳೆದ ಮೂರ್ನಾಲ್ಕು ದಿನಗಳಿಂದ ಅಮೆರಿಕದ ಅಧ್ಯಕ್ಷರ ಚೇತರಿಕೆಗೆ ಹಾರೈಸಿ ಉಪವಾಸದೊಂದಿಗೆ ನಿದ್ದೆಯನ್ನೂ ಮಾಡುತ್ತಿರಲಿಲ್ಲ. ಇಂದು ಬೆಳಗ್ಗೆ ಅವರು ಹೃದಯಾಘಾತದಿಂದ ನಿಧನರಾದರು'' ಎಂದು ರಾಜು ಅವರ ಹಿತೈಷಿಯೊಬ್ಬರು ಹೇಳಿದ್ದಾರೆ.