'ಮಹಾಘಟಬಂಧನಕ್ಕೆ ಎಐಎಂಐಎಂ ಬೆಂಬಲ ನೀಡುತ್ತದೆಯೇ?' ಎಂಬ ಪ್ರಶ್ನೆಗೆ ಅಸದುದ್ದೀನ್ ಪ್ರತಿಕ್ರಿಯೆ ಇಲ್ಲಿದೆ
ಹೊಸದಿಲ್ಲಿ: ಬಿಹಾರ ಚುನಾವಣೆಯಲ್ಲಿ ತನ್ನ ಪಕ್ಷ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದರೆ ಆರ್ ಜೆಡಿ ನೇತೃತ್ವದ ಮಹಾ ಘಟ ಬಂಧನಕ್ಕೆ ಬೆಂಬಲ ನೀಡಬೇಕೇ, ಬೇಡವೇ ಎಂದು ಒಮ್ಮತದ ನಿರ್ಧಾರ ಕೈಗೊಳ್ಳಲಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಮಂಗಳವಾರ ರಾತ್ರಿ ಹೇಳಿದ್ದಾರೆ.
‘ಇಂಡಿಯಾ ಟುಡೇ’ ಸುದ್ದಿವಾಹಿನಿಯಲ್ಲಿ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉವೈಸಿ ಒಂದು ವೇಳೆ ತನ್ನ ಪಕ್ಷವು ಕಿಂಗ್ ಮೇಕರ್ ಆಗಿ ಹೊರಹೊಮ್ಮಿದರೆ ಪಕ್ಷದ ಬಿಹಾರ ರಾಜ್ಯ ನಾಯಕತ್ವ ಸೇರಿದಂತೆ ಪಕ್ಷದ ಎಲ್ಲ ನಾಯಕರಲ್ಲಿ ಸಮಾಲೋಚಿಸುವೆ ಎಂದರು.
ಆರ್ ಜೆಡಿ ನೇತೃತ್ವದ ಮೈತ್ರಿಕೂಟಕ್ಕೆ ತಮ್ಮ ಪಕ್ಷ ಹಾನಿ ಮಾಡಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಉವೈಸಿ, “ನನ್ನ ಹಾಗೂ ನ್ನ ಪಕ್ಷದ ಮೇಲೆ ಇಂತಹ ಆರೋಪ ಯಾವಾಗಲೂ ಮಾಡಲಾಗುತ್ತದೆ. ಈ ಕುರಿತು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಪ್ರಜಾಪ್ರಭುತ್ವವನ್ನು ನಾವು ಬಲಿಷ್ಠ ಗೊಳಿಸುತ್ತಿದ್ದೇಯೇ ಹೊರತು ಅದನ್ನು ದುರ್ಬಲಗೊಳಿಸುತ್ತಿಲ್ಲ. ದೇಶದ ಯಾವುದೆ ಭಾಗದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ನಮಗಿದೆ. ಒಂದು ವೇಳೆ ಪಕ್ಷವೊಂದರ ಫಲಿತಾಂಶವನ್ನು ನಾನು ಹಾನಿ ಮಾಡಿದ್ದರೆ, ಅವರು ಏಕೆ ಗುಜರಾತ್, ಕರ್ನಾಟಕ, ಮಧ್ಯಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಸೋತಿದ್ದಾರೆ? ಆ ಸೋಲಿಗೆ ಯಾರು ಕಾರಣರು? ಎಂದು ಕಾಂಗ್ರೆಸ್ ನತ್ತ ಬೆಟ್ಟು ಮಾಡಿದರು.