ಟೆಕ್ಕಿಯನ್ನು ಜೀವಂತ ದಹಿಸಿದ ಸಂಬಂಧಿಕರು

Update: 2020-11-25 13:28 GMT

ಹೈದರಾಬಾದ್: ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಮಲ್ಲಿಯಾಲ್‌ನಲ್ಲಿ 37 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಅವರ ಸಂಬಂಧಿಕರೇ ಮನೆಯೊಳಗೆ ಕೂಡಿ ಹಾಕಿ ಕುರ್ಚಿಯಲ್ಲಿ ಕೈಕಾಲು ಕಟ್ಟಿ ಜೀವಂತ ಸುಟ್ಟುಹಾಕಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಟೆಕ್ಕಿಯು ತನ್ನ ಮೈದುನನ್ನು ಕೊಲ್ಲಲು ವಾಮಾಚಾರದಲ್ಲಿ ತೊಡಗಿದ್ದಾನೆಂಬ ಶಂಕೆಯ ಮೇರೆಗೆ ಅವರ ಸಂಬಂಧಿಗಳೇ ಈ ಕೃತ್ಯ ನಡೆಸಿದ್ದಾರೆಂದು ತಿಳಿದುಬಂದಿದೆ. ಮಲ್ಲಿಯಾಲ್ ಮಂಡಲದ ಬಲ್ವಂತಪುರದ ಹೊರವಲಯದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.

ಮೃತಪಟ್ಟ ಟೆಕ್ಕಿಯನ್ನು ಹೈದರಾಬಾದ್‌ನ ಅಲ್ವಾಲ್ ಮೂಲದ ರಾಚಾರ್ಲಾ ಪವನ್ ಕುಮಾರ್ ಎಂದು ಗುರುತಿಸಲಾಗಿದೆ.

  ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಪವನ್ ಕುಮಾರ್ ಇತ್ತಿಚೆಗೆ ಅನಾರೋಗ್ಯದಿಂದ ನಿಧನರಾಗಿರುವ ಪತ್ನಿಯ ಸಹೋದರ ಜಗನ್ ಅವರ ವಿಧವೆ ಪತ್ನಿಗೆ ಸಾಂತ್ವಾನ ಹೇಳಲು ಬಲವಂತಪುರಕ್ಕೆ ಬಂದಿದ್ದರು. ಪವನ್ ಭೇಟಿ ನೀಡಿದಾಗ ಜಗನ್ ಅವರ ಪತ್ನಿ, ಕುಟುಂಬದ ಇನ್ನೊಬ್ಬ ಸದಸ್ಯರು ದೇವಾಲಯದ ಬಳಿ ನಿರ್ಮಿಸಲಾದ ಮನೆಯಲ್ಲಿದ್ದರು. ಈ ವೇಳೆ ಪವನ್ ಮೇಲೆ ಅವರ ಸಂಬಂಧಿಕರೇ ಹಲ್ಲೆ ನಡೆಸಿದ್ದಾರೆ.

ಪವನ್ ಹೆಂಡತಿಯ ಪ್ರಕಾರ ಪವನ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ.

  ನಾವು ಘಟನಾ ಸ್ಥಳಕ್ಕೆ ಧಾವಿಸಿ ಮುಚ್ಚಿದ್ದ ಕೊಠಡಿಯ ಬಾಗಿಲು ತೆರೆದಿದ್ದೆವು. ಕುಮಾರ್‌ರನ್ನು ಕುರ್ಚಿಯಲ್ಲಿ ಕಟ್ಟಿಹಾಕಿದ್ದನ್ನು ನಾವು ನೋಡಿದ್ದೇವೆ. ಅವರು ಸಂಪೂರ್ಣ ಸುಟ್ಟು ಕರಕಲಾಗಿದ್ದು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಜಗನ್ ಪತ್ನಿ ಸುಮಲತಾ ಅಪರಾಧವನ್ನು ಒಪ್ಪಿಕೊಂಡಿದ್ದರು, ಪೊಲೀಸ್ ಸ್ಟೇಶನ್‌ನಲ್ಲಿ ಶರಣಾಗಿದ್ದಾರೆ ಎಂದು ಮಲ್ಲಿಯಾಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಾಗರಾಜು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News