ಅಸ್ಸಾಂನಲ್ಲಿ ಎನ್ಆರ್ಸಿ ಪೂರ್ಣವಾಗಿಲ್ಲ: ಬಿಜೆಪಿ ಮುಖಂಡ ಹಿಮಂತಾ ಬಿಸ್ವಾ
ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ)ಅಪೂರ್ಣವಾಗಿದೆ. ಬರಾಕ್ ಕಣಿವೆ ವಲಯದಲ್ಲಿ ನೆಲೆಸಿರುವ ಹಿಂದೂಗಳಿಗೆ ನ್ಯಾಯ ಸಿಗುವ ಅಗತ್ಯವಿದೆ ಎಂದು ಈಶಾನ್ಯ ರಾಜ್ಯದಲ್ಲಿ ಬಿಜೆಪಿಯ ಟ್ರಬಲ್ ಶೂಟರ್ ಆಗಿರುವ, ಅಸ್ಸಾಂನ ಸಚಿವ ಹಿಮಂತಾ ಬಿಸ್ವಾ ಸರ್ಮಾ ಹೇಳಿದ್ದಾರೆ.
ಮಾಜಿ ಸಂಯೋಜಕ ಪ್ರತೀಕ್ ಹಜೆಲಾರಿಂದಾಗಿ ಎನ್ಆರ್ಸಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಹಿಮಂತಾ ಬಿಸ್ವಾ ಆರೋಪಿಸಿದರು.
ಬರಾಕ್ ಕಣಿವೆಯ ಹಿಂದೂಗಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದೇವೆ. ಪ್ರತೀಕ್ ಹಜೆಲಾರಿಂದಾಗಿ ಎನ್ಆರ್ಸಿ ಅಪೂರ್ಣವಾಗಿದೆ. ನಾವು ಶೇ.90ರಷ್ಟು ಕೆಲಸ ಮಾಡಿದ್ದೇವೆ. ಹಿಂದೂಗಳಿಗೆ ನ್ಯಾಯ ಒದಗಿಸಲು ನಾವು ಇನ್ನು ಕೆಲವು ಕೆಲಸ ಮಾಡಲು ಬಾಕಿ ಇದೆ ಎಂದು ಬರಾಕ್ ಕಣಿವೆಯ ಕರಿಮ್ಗಂಜ್ ಜಿಲ್ಲೆಯಲ್ಲಿ ನಡೆದ ಸಭೆಯಲ್ಲಿ ಸರ್ಮಾ ಹೇಳಿದ್ದಾರೆ.
ಅಸ್ಸಾಂನ ಎನ್ಆರ್ಸಿಯ ಮೊದಲ ಪಟ್ಟಿಯನ್ನು ಕಳೆದ ವರ್ಷ ಆಗಸ್ಟ್ನಲ್ಲಿ ಬಿಡುಗಡೆ ಮಾಡಲಾಗಿತ್ತು. 3.3 ಕೋಟಿ ಅರ್ಜಿದಾರರ ಪೈಕಿ 19.22 ಲಕ್ಷ ಜನರನ್ನು ಪಟ್ಟಿಯಿಂದ ಹೊರಗಿಡಲಾಗಿತ್ತು. ಬಿಜೆಪಿ ಈ ಪಟ್ಟಿಯ ಕುರಿತು ಟೀಕೆ ಮಾಡಿದ್ದು, ಹಲವು ಅಪ್ಪಟ ನಾಗರಿಕರನ್ನು ಮುಖ್ಯವಾಗಿ 1971ಕ್ಕಿಂತ ಮೊದಲು ವಲಸೆ ಬಂದಿರುವ ಬಾಂಗ್ಲಾದೇಶದ ನಿರಾಶ್ರಿತರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.