ಒಮೈಕ್ರಾನ್ ಹೊಸ ಉಪರೂಪಾಂತರಿ ತಳಿ ವರದಿ; ರಾಜ್ಯದಲ್ಲಿ ಮುನ್ನೆಚ್ಚರಿಕಾ ಸೂಚನೆಗಳನ್ನು ನೀಡಿದ ಆರೋಗ್ಯ ಇಲಾಖೆ

Update: 2023-06-05 07:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.25: ಕೋವಿಡ್-19ನ ಬಿಎ.2.75 ಹಾಗೂ ಬಿಜೆ.1ನ ಪುನರ್ ಸಂಯೋಜಿತ, ಒಮೈಕ್ರಾನ್ ಬಿಕ್ಯೂ.1 ಹೊಸ ಉಪರೂಪಾಂತರಿ ತಳಿಯು, ನೆರೆಯ ಮಹಾರಾಷ್ಟ್ರದಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಹಾಗೂ ಮುಂಬರುವ ದೀಪಾವಳಿ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಗುಂಪು ಸೇರುವ ಸಾಧ್ಯತೆಗಳು ಅಧಿಕವಾಗಿರುವುದರಿಂದ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಸೂಚನೆಗಳನ್ನು ನೀಡಿದೆ.

► ಸೂಚನೆಗಳು: ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ಹತ್ತಿರದ ಆಸ್ಪತ್ರೆ/ಆರೋಗ್ಯ ಸಂಸ್ಥೆಗಳಲ್ಲಿ ಕೋವಿಡ್ 19 ಪರೀಕ್ಷೆ(ರಾಪಿಡ್ ಆಂಟಿಜೆನ್ ಟೆಸ್ಟಿಂಗ್ ಮಾಡಿಸಿಕೊಳ್ಳುವುದು. ನೆಗೆಟಿವ್ ಫಲತಾಂಶ ಬಂದಲ್ಲಿ ಆರ್‍ಟಿ ಪಿಸಿಆರ್ ಪರೀಕ್ಷೆ) ಮಾಡಿಸಿಕೊಳ್ಳುವುದು ಹಾಗೂ ಫಲಿತಾಂಶ ದೊರೆಯುವವರೆಗೂ ಸ್ವಯಂ ಪ್ರತ್ಯೇಕತೆಯಲ್ಲಿ ಇರಬೇಕು.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಶೀಘ್ರವಾಗಿ ಹತ್ತಿರದ ಆಸ್ಪತ್ರೆಯಲ್ಲಿ  ವೈದ್ಯಕೀಯ ಆರೈಕೆಯನ್ನು ಪಡೆಯಬೇಕು. ಏರ್ ಕಂಡೀಷನ್ ವ್ಯವಸ್ಥೆ ಇರುವ ಒಳಾಂಗಣಗಳು, ಅಗತ್ಯ ಗಾಳಿ- ಬೆಳಕಿಲ್ಲದಿರುವ ಸ್ಥಳಗಳು, ಮುಚ್ಚಿದ ಸಂರಕ್ಷಣೆಗಳು(ಆಟ), ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳು, ಆರೋಗ್ಯ ಸಂಸ್ಥೆಗಳಲ್ಲಿ(ಎನ್-95/ಮೆಡಿಕಲ್ ಮಾಸ್ಕ್) ಮಾಸ್ಕ್ ಧರಿಸಬೇಕು.

ಹಬ್ಬಗಳನ್ನು ಸಾಧ್ಯವಾದಷ್ಟು ಹೊರಾಂಗಣಗಳಲ್ಲಿ ಆಚರಿಸುವುದು ಹಾಗೂ ಜನ ದಟ್ಟಣೆಯ ಪ್ರದೇಶಗಳಂದ ದೂರವಿರುವುದು. ಕೋವಿಡ್ 19 ಲಸಿಕೆಯ ಬೂಸ್ಟರ್, ಮುಂಜಾಗ್ರತಾ ಡೋಸ್ ಲಸಿಕೆ ಬಾಕಿ ಇರುವವರು ಲಸಿಕೆಯನ್ನು ಪಡೆಯಬೇಕು. 60 ವರ್ಷ ವಯಸ್ಸು ಮೇಲ್ಪಟ್ಟವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು(ವಿಶೇಷವಾಗಿ ಈ ಹಿಂದೆ ಕೋವಿಡ್-19 ಸೋಂಕಿಗೆ ತುತ್ತಾಗದವರು) ಶೀಘ್ರವೇ ಲಸಿಕೆಯನ್ನು ಪಡೆಯಬೇಕು.

ಇದೇ ಅಲ್ಲದೇ, immunodeficiency ಹಾಗೂ immunosuppressed, ಡಯಾಲಿಸಿಸ್ ಮಾಡಿಸಿಕೊಳ್ಳುವವರು ಮತ್ತು ಕ್ಯಾನ್ಸರ್ ನಿರೋಧಕ ಔಷಧಿಗಳನ್ನು ಸೇವಿಸುತ್ತಿರುವವರು ತಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಸಮಾಲೋಚನೆಯ ನಂತರ, ಆದ್ಯತೆಯ ಮೇಲೆ ಕೋವಿಡ್ 19 ಲಸಿಕೆಯನ್ನು ಪಡೆಯುವುದು ಸೂಕ್ತವಾಗಿದೆ.

ಕೋವಿಡ್ ಸೂಕ್ತ ನಡವಳಿಕೆಗಳಾದ(covid appropriate behaviours) ಮಡಚಿದ ಮೊಣಕೈ ಒಳಗೆ ಕೆಮ್ಮುವುದು ಹಾಗೂ ಸೀನುವುದು, ಕರವಸ್ತ್ರ, ಟಿಶ್ಯೂ ಪೇಪರ್‍ನ ಬಳಕೆ, ಸಾರ್ವಜನಿಕ ಸ್ಥಳಗಳಲ್ಲಿ ಮೂಗನ್ನು ಶುಚಿಗೊಳಿಸದಿರುವುದು ಹಾಗೂ ಉಗುಳದಿರುವುದು, ಕೈಗಳನ್ನು ಸೋಪ್ ಹಾಗೂ ನೀರಿನಿಂದ ತೊಳೆಯುವುದು, ಹಾಗೂ ಸೋಂಕಿನ ಲಕ್ಷಣಗಳನ್ನು ಹೊಂದಿದವರ ಸಂಪರ್ಕದಿಂದ ದೂರವಿರುವುದು, ಇವುಗಳನ್ನು ಪಾಲಿಸಬೇಕು.

ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಪರಿಸರ ಸ್ನೇಹಿ ‘ಹಸಿರು ಪಟಾಕಿ'ಗಳನ್ನು ಬಳಸುವಂತೆ ಪ್ರೇರೇಪಿಸಬೇಕು. ಈ ಸೂಚನೆ ಹಾಗೂ ಸಲಹೆಗಳನ್ನು ಸಾರ್ವಜನಿಕರು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಬಿಬಿಎಂಪಿ ಹಾಗೂ ಜಿಲ್ಲಾಡಳಿತಗಳಿಗೆ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಡಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News