ಕುಂಜೂರು: ರೈಲು ಹಳಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ; ಆತ್ಮಹತ್ಯೆ ಶಂಕೆ

Update: 2022-01-15 06:54 GMT

ಪಡುಬಿದ್ರೆ, ಜ.15: ವ್ಯಕ್ತಿಯೋರ್ವನ ಮೃತದೇಹ ಪಡುಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜೂರು ಗ್ರಾಮದ ರೈಲು ಹಳಿಯಲ್ಲಿ ಪತ್ತೆಯಾಗಿದ್ದು, ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತರನ್ನು ಅದಮಾರು ನಿವಾಸಿ ರಾಜೇಶ್ ಶೆಟ್ಟಿ(39) ಎಂದು ಗುರುತಿಸಲಾಗಿದೆ.

ರಾಜೇಶ್‍ ಶೆಟ್ಟಿ ಶುಕ್ರವಾರ ಬೆಳಗ್ಗೆ ಅದಮಾರಿನಲ್ಲಿರುವ ಬೈಕ್‌ನಲ್ಲಿ ಹೊರಟಿದ್ದರೆನ್ನಲಾಗಿದೆ. ಮಧ್ಯಾಹ್ನ ವೇಳೆ ಅವರ ಬೈಕ್ ಕುಂಜೂರು ಗ್ರಾಮದ ರೈಲು ಹಳಿ ಬಳಿ ನಿಲ್ಲಿಸಿದ್ದ ಸ್ಥಿತಿಯಲ್ಲಿದ್ದರೆ, ಅವರ ಮೃತದೇಹ ರೈಲಿನಡಿಗೆ ಸಿಲುಕಿ ಜರ್ಜರಿತಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈಯಲ್ಲಿದ್ದ ರಾಜೇಶ್ ಶೆಟ್ಟಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾಗಿದ್ದು, ವಾರದ ಹಿಂದೆಯಷ್ಟೇ ಊರಿಗೆ ವಾಪಾಸಾಗಿದ್ದರು. ಮನೋರೋಗಕ್ಕೆ ಚಿಕಿತ್ಸೆಯನ್ನೂ ಪಡೆದಿದ್ದ ಅವರು ಸರಿಯಾದ ಉದ್ಯೋಗವೂ ಸಿಗದ ಕಾರಣ ಚಿಂತೆಗೀಡಾಗಿದ್ದರೆನ್ನಲಾಗಿದ್ದು, ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹ ತೆರವು: ದೃಢಕಾಯದ ಶರೀರದ ಹೊಂದಿದ್ದ ರಾಜೇಶ್ ಶೆಟ್ಟಿ ಮೃತದೇಹ ರೈಲಿನಡಿಗೆ ಸಿಲುಕಿ ಛಿದ್ರಛಿದ್ರವಾಗಿ ಹಳಿ ಚದುರಿ ಹೋಗಿತ್ತು. ಸಮಾಜ ಸೇವಕ ಆಸಿಫ್ ಆಪತ್ಬಾಂಧವ ತೆರವುಗೊಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News