ಸಾಣೆಹಳ್ಳಿ ಸ್ವಾಮೀಜಿಗೆ ರಂಗಭೂಮಿ ವಾರ್ಷಿಕ ಪ್ರಶಸ್ತಿ-2022

Update: 2022-01-25 13:40 GMT

ಉಡುಪಿ, ಜ.25: ರಂಗಭೂಮಿ ಉಡುಪಿಯ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಈ ಬಾರಿ ‘ರಂಗ ಪಂಚಾನನ’ ಬಿರುದಿನೊಂದಿಗೆ ರಂಗಜಂಗಮ ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ನೀಡಿ ಗೌರವಿಸಲಾಗುವುದು.

1965ರಲ್ಲಿ ಪ್ರಾರಂಭಗೊಂಡ ರಂಗಭೂಮಿ ಉಡುಪಿ ಸಂಸ್ಥೆಯು 1967ರಿಂದ ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದ ನಾಡಿನ ಗಣ್ಯರಿಗೆ ರಂಗಭೂಮಿ ಪ್ರಶಸ್ತಿುನ್ನು ಪ್ರತಿವರ್ಷ ನೀಡುತ್ತಾ ಬಂದಿದೆ.

ಧಾರ್ಮಿಕ ಮುಖಂಡರಾಗಿದ್ದುಕೊಂಡು ಸಾಣೆಹಳ್ಳಿಯ ತಮ್ಮ ಮಠದ ಆವರಣದಲ್ಲಿ ನಾಟಕ ಶಾಲೆಯನ್ನು ನಿರ್ಮಾಣ ಮಾಡುವುದರ ಮೂಲಕ ರಂಗಶಿಕ್ಷಣ ನೀಡಿ ನೂರಾರು ರಂಗಕಲಾವಿದರನ್ನು ಕನ್ನಡ ನಾಟಕ ರಂಗಕ್ಕೆ ನೀಡಿದ ಹಾಗೂ ಅತ್ಯದ್ಭುತವಾದ ರಂಗಮಂದಿರಗಳ ನಿರ್ಮಿಸಿ ನೂರಾರು ಕಲಾಪ್ರಕಾರ ಗಳಿಗೆ ಅವಕಾಶ ನೀಡಿದ ಕಲಾಪ್ರೇಮಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಾಗಿದ್ದಾರೆ.

ತಮ್ಮ ಶಿವಸಂಚಾರ ತಂಡದ ಮುಖಾಂತರ ದೇಶಾದ್ಯಂತ ನಾಟಕಗಳ ಪ್ರದರ್ಶನ ನೀಡಿದ್ದಲ್ಲದೇ, 40ಕ್ಕೂ ಅಧಿಕ ಕೃತಿಗಳ ರಚನೆ, 100ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯರಂಗಕ್ಕೆ ಅನುಪಮ ಕೊಡುಗೆ ನೀಡಿದವರು. ತಮ್ಮ ಮಠದ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಬಾಳಿಗೆ ಬೆಳಕನ್ನು ನೀಡಿದವರು.

ಇನ್ನೂ ಹಲವು ಬಹುಮುಖದ ಅನನ್ಯ ಚೇತನರಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಈ ಬಾರಿ ರಂಗಭೂಮಿ ಉಡುಪಿ ಸಂಸ್ಥೆ ‘ರಂಗ ಪಂಚಾನನ’ ಬಿರುದಿನೊಂದಿಗೆ ಫೆಬ್ರವರಿ 13ರ ರವಿವಾರದಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಗಣ್ಯರ ಉಪಸ್ಥಿತಿ ಯಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಿದೆ.

ಫೆ.12ರಂದು 42ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಹಾಗೂ ಪ್ರಥಮ ಬಹುಮಾನಿತ ಸಂಚಯ ಬೆಂಗಳೂರು ತಂಡದ ‘ಕಾಮರೂಪಿಗಳ್’ ನಾಟಕದ ಮರು ಪ್ರದರ್ಶನ ನಡೆಯಲಿದೆ. ಅದೇ ರೀತಿ ಫೆ.11ರಂದು ಉಡುಪಿ ಜಾನಪದ ಪರಿಷತ್‌ನ ಸಹಕಾರದೊಂದಿಗೆ ಜಾನಪದ ಉತ್ಸವ ನಡೆಯಲಿದೆ ಎಂದು ರಂಗಭೂಮಿ ಉಡುಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News