ಗೋವುಗಳ ಕಳ್ಳತನ ತಡೆಗಟ್ಟಲು ಗೋರಕ್ಷಣಾ ಸಮಿತಿ ರಚಿಸಿ: ಸಚಿವ ಪ್ರಭು ಬಿ.ಚವ್ಹಾಣ್

Update: 2022-02-04 07:18 GMT

ಉಡುಪಿ, ಫೆ.4: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಗೋವುಗಳ ಕಳವು ಪ್ರಕರಣಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಕೂಡಲೇ ಕ್ರಮಕೈಗೊಂಡು, ಕಡಿವಾಣ ಹಾಕುವಂತೆ ನಿರ್ದೇಶಿಸಿ ರಾಜ್ಯ ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಅವರು ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ.

ಇದಕ್ಕಾಗಿ ಜಿಲ್ಲೆಗಳಲ್ಲಿ ಗೋ ರಕ್ಷಣಾ ಸಮಿತಿ ರಚಿಸಬೇಕೆಂದು ಸಚಿವರು ಸೂಚಿಸಿದ್ದಾರೆ. ಕರಾವಳಿ ಭಾಗದಲ್ಲಿ ನಿರಂತರವಾಗಿ ಗೋವುಗಳು ಕಳವು ಆಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು/ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಗೋ ರಕ್ಷಣಾ ಸಮಿತಿ ರಚಿಸಿ, ಗೋವುಗಳನ್ನು ಅಕ್ರಮವಾಗಿ ಸಾಗಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟು, ಚಲನ-ವಲನ ಆಧರಿಸಿ, ಈ ಭಾಗದಲ್ಲಿ ರಾತ್ರಿ ಮತ್ತು ಹಗಲು ಪಾಳಿಗಳಲ್ಲಿ ಪೊಲೀಸರ ಬೀಟುಗಳನ್ನುಹೆಚ್ಚಿಸಿ, ಚೆಕ್‌ಪೋಸ್ಟ್ ಗಳು/ನಾಕಾ ಬಂಧಿಗಳನ್ನು ಪರಿಣಾಮಕಾರಿಯಾಗಿ ಬಲಗೊಳಿಸಿ ತಪಾಸಣೆ ನಡೆಸುವ ಮೂಲಕ ಗೋಪಾಲಕರಲ್ಲಿ ಇರುವ ಭಯದ ವಾತಾವರಣವನ್ನು ಹೋಗಲಾಡಿಸಿ ಸರಕಾರ ಸದಾ ನಿಮ್ಮಿಂದಿಗಿದೆ ಎಂಬ ಸಂದೇಶವನ್ನು ಸಾರಬೇಕಿದೆ ಎಂದು ಸಚಿವರು ಪತ್ರದಲ್ಲಿ ಬರೆದಿದ್ದಾರೆ.

ಈ ಭಾಗದಲ್ಲಿ ಗೋವುಗಳನ್ನು ಮಾರಾಟ ಮಾಡುವ ಮಾಲಕರು ಹಾಗೂ ಕೊಳ್ಳುವವರ ನಡುವೆ ಇ-ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದುಕೊಡಬೇಕು. ಮುಚ್ಚಳಿಕೆ ಪ್ರಮಾಣಪತ್ರದಲ್ಲಿ ಸಮಯ, ಅದಕ್ಕೆ ಸಂಬಂಧಿಸಿದಂತೆ ಮೊಬೈಲುಗಳ ಲ್ಲಿರುವ ಡೇಟ್ ಕ್ಯಾಮೆರಾ ಆ್ಯಪ್‌ಗಳಲ್ಲಿ ಸಮಯ ಸಮೇತ ಭಾವಚಿತ್ರವನ್ನು ಸೆರೆ ಹಿಡಿದುಕೊಂಡು ಗೋವುಗಳನ್ನು ಸಾಗಿಸುವ ವಾಹನಗಳು ಪೊಲೀಸರ ತಪಾಸಣೆ ಸಮಯದಲ್ಲಿ ಹಾಜರುಪಡಿಸಬೇಕು. ಹಾಗೊಂದು ವೇಳೆ ಸಂಶಯ ಬಂದ ಪಕ್ಷದಲ್ಲಿ ಈ ಕುರಿತು ತಪಾಸಣೆ ನಡೆಸಿದ ನಂತರದಲ್ಲಿ ಖಚಿತತೆ ಆಧಾರದ ಮೇರೆಗೆ ವಾಹನಗಳನ್ನು ಬಿಟ್ಟುಕಳುಹಿಸುವ ಬಗ್ಗೆ ಕೂಡಲೇ ಠಾಣಾಧಿಕಾರಿಗಳು ಸ್ಥಳೀಯವಾಗಿ ಕ್ರಮಕೈಗೊಳ್ಳಬೇಕು ಎಂದೂ ಪ್ರಭು ಬಿ.ಚವ್ಹಾಣ್ ವಿವರಿಸಿದ್ದಾರೆ.

ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದರೂ ಸಹ ಗೋವುಗಳ ಕಳವು ಪ್ರಕರಣಗಳು ಮತ್ತು ಅಕ್ರಮ ಗೋವುಗಳ ಸಾಗಾಣಿಕೆ ಮುಂದುವರೆದಿದ್ದು, ನಿರಂತರವಾಗಿ ಗೋವುಗಳನ್ನು ಕಳವು ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಗಡಿಪಾರು ಮಾಡುವ ಕಠಿಣ ಕ್ರಮಗಳನ್ನು ಕೈಗೊಳ್ಳುವುದ ರಿಂದ ಗೋವು ಕಳವು ಪ್ರಕರಣಗನ್ನು ತಡೆಗಟ್ಟಲು ಸಾಧ್ಯವಾಗಲಿದೆ.

ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗೋವುಗಳ ಕಳವು ಪ್ರಕರಣಗಳು ಮರುಕಳಿಸದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಗೋಪಾಲಕರ ಕುಟುಂಬಗಳನ್ನು ಕಳ್ಳರಿಂದ ರಕ್ಷಣೆ ಮಾಡಲು ವಿಫಲವಾದ ಪಕ್ಷದಲ್ಲಿ ಆ ಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೊಣೆಗಾರರನ್ನಾಗಿ ಮಾಡಲು ಕ್ರಮಕೈಗೊಳ್ಳುವ ಬಗ್ಗೆ ಸರಕಾರದ ಹಂತದಲ್ಲಿ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವ ಮೂಲಕ ಗೋವುಗಳ ಕಳವು ಪ್ರಕರಣಗಳನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸುವಂತೆ ಸಚಿವ ಪ್ರಭು ಬಿ.ಚವ್ಹಾಣ್ ಪತ್ರದಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News