ಅಪಘಾತದಲ್ಲಿ ಮೃತಪಟ್ಟ ಕಲಾವಿದನ ಕುಟುಂಬಕ್ಕೆ ನೆರವಿನ ಹಸ್ತಾಂತರ

Update: 2022-02-06 14:56 GMT

ಹಿರಿಯಡ್ಕ, ಫೆ.6: ಕಳೆದ ತಿಂಗಳು ವಾಹನ ಅಪಘಾತದಲ್ಲಿ ಮೃತಪಟ್ಟ ಹಿರಿಯಡಕ ಮೇಳದ ಪ್ರಸಿದ್ಧ ಕಲಾವಿದ ವೇಣೂರು ವಾಮನ ಕುಮಾರ್ ಇವರ ಪತ್ನಿ ಆಶಾ ಇವರಿಗೆ ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ 50 ಸಾವಿರ ರೂ.ಗಳ ಸಾಂತ್ವಾನ ನಿಧಿಯನ್ನು ನಿನ್ನೆ ಹಿರಿಯಡಕ ಮೇಳದ ಯಕ್ಷಗಾನ ಪ್ರದರ್ಶನದ ವೇದಿಕೆಯಲ್ಲಿ ನೀಡಲಾಯಿತು.

ಮೇಳದ ಯಜಮಾನರೂ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಪಿ. ಕಿಶನ್ ಹೆಗ್ಡೆ, ಎಸ್.ವಿ.ಭಟ್, ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ ಈ ವೇಳೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀನಿವಾಸ ರಾವ್ ನೇತೃತ್ವದಲ್ಲಿ ಹಿರಿಯಡಕದ ನಾಗರಿಕರಿಂದ ಸಂಗ್ರಹಿಸಿದ ಒಂದು ಲಕ್ಷ ರೂ. ಹಾಗೂ ಮೇಳದ ಕಲಾವಿದರಿಂದ ಸಂಗ್ರಹಿಸಿದ 32,000ರೂ.ಗಳ ನಿಧಿಯನ್ನು ಸಹ ಕಲಾವಿದನ ಕುಟುಂಬಕ್ಕೆ ನೀಡಲಾಯಿತು.

ಮೇಳದ ಯಜಮಾನ ಪಿ.ಕಿಶನ್ ಹೆಗ್ಡೆ, ವಾಮನ ಕುಮಾರ ಅವರ ಇಬ್ಬರು ಮಕ್ಕಳ ಮುಂದಿನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಹೇಳಿದರು. ಹಿರಿಯಡಕ ದೇವಳದ ಅರ್ಚಕ ರಂಗನಾಥ ಭಟ್, ಪೂರ್ಣಿಮಾ ಸುರೇಶ್ ಹಾಗೂ ಕಲಾವಿದರ ಪ್ರತಿನಿಧಿಯಾದ ಸಿದ್ಧಕಟ್ಟೆ ಸದಾಶಿವ ಶೆಟ್ಟಿ ಈ ಸಂದರ್ಭದಲ್ಲಿ ನುಡಿನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News