ತಂತ್ರಜ್ಞಾನ ಆಧಾರಿತ ವಿಪತ್ತು ನಿರ್ವಹಣಾ ಯೋಜನೆ ಮಾಹಿತಿ ಶೀಘ್ರ ಪೂರ್ಣಗೊಳಿಸಿ: ಡಾ.ಮನೋಜ್ ರಾಜನ್

Update: 2022-02-11 16:14 GMT

ಉಡುಪಿ, ಫೆ.11: ಭೌಗೋಳಿಕ ತಂತ್ರಜ್ಞಾನ ಆಧಾರಿತ ವಿಪತ್ತು ನಿರ್ವಹಣಾ ಯೋಜನೆಯನ್ನು ಇಡೀ ದೇಶದಲ್ಲಿ ಪೈಲಟ್ ಯೋಜನೆಯಾಗಿ ಕರ್ನಾಟಕದಲ್ಲಿ ಸಿದ್ದಪಡಿಸುತ್ತಿದ್ದು, ಈ ಯೋಜನೆಯಡಿ ರಾಜ್ಯದ 5 ಪೈಲಟ್ ಜಿಲ್ಲೆಗಳಲ್ಲಿ ಒಂದಾಗಿರುವ ಉಡುಪಿ ಜಿಲ್ಲೆಯ ಸಂಪೂರ್ಣ ಮಾಹಿತಿ ಅಳವಡಿಸುವ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯು್ತ ಡಾ.ಮನೋಜ್ ರಾಜನ್ ತಿಳಿಸಿದ್ದಾರೆ.

ಶುಕ್ರವಾರ ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಭೌಗೋಳಿಕ ತಂತ್ರಜ್ಞಾನ ಆಧಾರಿತ ವಿಪತ್ತು ನಿರ್ವಹಣಾ ಯೋಜನೆಗೆ ಮಾಹಿತಿ ಅಳವಡಿಕೆಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ವಿಪತ್ತು ಸಂಭವಿಸಿದ ಸಮಯದಲ್ಲಿ ಅತ್ಯಂತ ತ್ವರಿತವಾಗಿ ಸ್ಪಂದಿಸಿ ಹಾಗೂ ಯೋಜನಾ ಬದ್ದವಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೀವ ಹಾನಿ ಹಾಗೂ ಆಸ್ತಿ ಹಾನಿಯಾಗುವುದನ್ನು ತಡೆಯಲು ಸಾಧ್ಯವಿದೆ. ಇದಕ್ಕಾಗಿ ಭೌಗೋಳಿಕ ತಂತ್ರಜ್ಞಾನ ಆಧಾರಿತ ವಿಪತ್ತು ನಿರ್ವಹಣಾ ಯೋಜನೆ ನೆರವು ಅತ್ಯಂತ ಅಗತ್ಯವಾಗಿದ್ದು, ಈ ಯೋಜನೆಯಿಂದ ಕುಳಿತಲ್ಲಿಂದಲೇ, ಅತ್ಯಂತ ಶೀಘ್ರದಲ್ಲಿ ವಿಪತ್ತು ನಿರ್ವಹಣೆಗೆ ತ್ವರಿತವಾಗಿ ಮತ್ತು ನಿಖರ ಯೋಜನೆ ರೂಪಿಸಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ ಎಂದರು.

ಜಿಲ್ಲೆಯಲ್ಲಿ ಸಂಭವಿಸಬಹುದಾದ ಯಾವುದೇ ವಿಪತ್ತುಗಳ ಯಶಸ್ವಿ ನಿರ್ವಹಣೆಗೆ ಅಗತ್ಯವಿರುವ ಲಭ್ಯ ಸಿಬ್ಬಂದಿ ಗಳು, ಅವರ ದೂರವಾಣಿ ಸಂಖ್ಯೆ, ಸುರಕ್ಷತಾ ಉಪಕರಣಗಳು, ಕಾಳಜಿ ಕೇಂದ್ರಗಳು, ಸರಕಾರಿ ಕಟ್ಟಡಗಳು, ಆಸ್ಪತ್ರೆಗಳು, ಅಂಬುಲೆನ್ಸ್‌ಗಳು, ವಾಹನಗಳು ಸೇರಿದಂತೆ ಎಲ್ಲಾ ತುರ್ತು ಅಗತ್ಯ ಮೂಲಭೂತ ಸೌಲಭ್ಯಗಳ ಅತ್ಯಂತ ನಿಖರ ಮಾಹಿತಿಯು ಈ ಯೋಜನೆಯಿಂದ ತಕ್ಷಣದಲ್ಲಿ ದೊರೆಯಲಿದೆ. ಇದರಿಂದ ಹೆಚ್ಚಿನ ಹಾನಿಯಾ ಗುವುದನ್ನು ತಡೆಯಲು ಸಾಧ್ಯವಿದ್ದು, ರಾಜ್ಯದಲ್ಲಿ ಸಿದ್ದಪಡಿಸುತ್ತಿರುವ ಈ ಯೋಜನೆ ಇಡೀ ದೇಶಕ್ಕೆ ಮಾದರಿ ಯಾಗಲಿದೆ ಎಂದರು.

ಈ ಯೋಜನೆಯ ಬಗ್ಗೆ ವಿವರವಾದ ಪ್ರಗತಿಯನ್ನು ಮಾರ್ಚ್ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ನಂತರ ಭಾರತ ಸರಕಾರಕ್ಕೆ ಸಲ್ಲಿಸ ಬೇಕಾಗಿರುವುದರಿಂದ ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯ ಅಗತ್ಯ ಮತ್ತು ನಿಖರವಾದ ಮಾಹಿತಿಗಳನ್ನು 10 ದಿನಗಳ ಒಳಗೆ ಸಂಪೂರ್ಣವಾಗಿ ಈ ಯೋಜನೆಯ ತಂತ್ರಾಂಶದಲ್ಲಿ ಅಳವಡಿಸುವಂತೆ ಡಾ.ಮನೋಜ್ ಸೂಚಿಸಿದರು.

ಈ ಕಾರ್ಯದಲ್ಲಿ ಯಾವುದೇ ತಾಂತ್ರಿಕ ಗೊಂದಲಗಳಿದ್ದಲ್ಲಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ನೆರವು ಪಡೆಯುವಂತೆ ಹಾಗೂ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿದಲ್ಲಿ ಯಾವುದೇ ಬಗೆಯ ವಿಪತ್ತುಗಳನ್ನು ತ್ವರಿತ ಹಾಗೂ ಯಶಸ್ವಿಯಾಗಿ ಎದುರಿಸಲು ಸಾಧ್ಯ ಎಂದರು.

ಪ್ರಸ್ತುತ ಸಿದ್ದಪಡಿಸುತ್ತಿರುವ ಯೋಜನೆಯ ಕಾರ್ ವೈಖರಿಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಅಳವಡಿಸಿರುವ ವಿವಿಧ ಕಟ್ಟಡಗಳ ಮಾಹಿತಿ, ಅದರ ಸ್ಥಿತಿಗತಿ, ಲಭ್ಯವಿರುವ ಸೌಲಭ್ಯಗಳು, ಆ ಕಟ್ಟಡದಲ್ಲಿ ಲಭ್ಯ ಸಿಬ್ಬಂದಿಗಳ ಹೆಸರು, ದೂರವಾಣಿ ಸಂಖ್ಯೆ ಕುರಿತ ಸಂಪೂರ್ಣ ವಿವರಗಳ ಮಾಹಿತಿ ಬಗ್ಗೆ ನಿಖರವಾದ ಅಂಕಿ ಅಂಶಗಳನ್ನು ಪ್ರದರ್ಶಿಸಿದರು.

ಸಭೆಯಲ್ಲಿ ಕುಂದಾಪುರ ಡಿಎಫ್‌ಓ ಆಶೀಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಹಶೀಲ್ದಾರ್‌ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News