ಮೀನು ಹಿಡಿಯುತ್ತಿದ್ದ ಯುವಕ ಸಮುದ್ರಕ್ಕೆ ಬಿದ್ದು ಮೃತ್ಯು
Update: 2022-03-07 16:30 GMT
ಬೈಂದೂರು, ಮಾ.7: ಸಮುದ್ರದಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಯುವಕರ್ನೋವ ಅಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬೈಂದೂರು ಸೋಮೇಶ್ವರ ಬೀಚ್ ಬಳಿ ಮಾ.6ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಬಿಜೂರು ಗ್ರಾಮದ ಬವಳಾಡಿ ನಿವಾಸಿ ಮಂಜುನಾಥ ದೇವಾಡಿಗ ಎಂಬವರ ಮಗ ಶಶಿಧರ್(23) ಎಂದು ಗುರುತಿಸಲಾಗಿದೆ. ಇವರು ಸ್ನೇಹಿತ ರೊಂದಿಗೆ ಸಮುದ್ರ ತೀರದ ಬಂಡೆ ಕಲ್ಲಿನ ಮೇಲೆ ನಿಂತುಕೊಂಡು ಮೀನಿಗೆ ಗಾಳ ಹಾಕುತ್ತಿದ್ದು, ಈ ವೇಳೆ ಕಲ್ಲಿಗೆ ಗಾಳ ಸಿಕ್ಕಿ ಹಾಕಿಕೊಂಡಿತು.ಆ ಗಾಳವನ್ನು ಬಿಡಿಸುತ್ತಿರುವಾಗ ಸಮುದ್ರದ ಅಲೆಯೊಂದು ಶಶಿಧರನಿಗೆ ಅಪ್ಪಳಿಸಿತು. ಇದರಿಂದ ಶಶಿಧರ್ ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋದರು.
ಕೂಡಲೇ ಅವರ ಸ್ನೇಹಿತರು ಅವರನ್ನು ಸಮುದ್ರದಿಂದ ಮೇಲಕ್ಕೆ ಎತ್ತಿದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಶಶಿಧರ್, ಬೈಂದೂರು ಸಮುದಾಯ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.