ಅರಣ್ಯ ಪ್ರದೇಶದಲ್ಲಿ ಕೈಗಾರಿಕೆ ನಿರ್ಮಿಸುವುದಕ್ಕೆ ವಿರೋಧಿಸಿ ಪ್ರತಿಭಟನೆ

Update: 2022-03-10 14:46 GMT

ಬೈಂದೂರು, ಮಾ.10: ರೈತಾಪಿ ವರ್ಗ, ಕೂಲಿಯಾಳುಗಳು ಸಹಿತ ಜನ ಜೀವನ ಹಾಗೂ ವನ್ಯಜೀವಿಗಳ ಬದುಕು ಕಸಿದು ಕಾಡು ಪ್ರದೇಶವನ್ನು ಕೈಗಾರಿಕಾ ಕ್ಷೇತ್ರಕ್ಕೆ ನೀಡುವುದು ಸೂಕ್ತವಲ್ಲ. ಕೈಗಾರಿಕಾ ಚಟುವಟಿಕೆಗಾಗಿ ಕಾಡು ಪ್ರದೇಶ ವನ್ನು ನಾಶ ಮಾಡುವುದರಿಂದ ಪರಿಸರದ ಮೇಲೆ ವ್ಯತ್ತಿರಿಕ್ತ ಪರಿಣಾಮ ಬೀರಲಿದೆ ಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಎಲ್.ವಿ. ಅಮೀನ್ ಆರೋಪಿಸಿದ್ದಾರೆ.

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ, ವನದುರ್ಗ ರೈತಶಕ್ತಿ ಗುಂಪು ಮತ್ತು ಹಳಗೇರಿ ಪರಿಸರ ಹಿತರಕ್ಷಣಾ ವೇದಿಕೆ ಸಹಯೋಗದಲ್ಲಿ ಗುರುವಾರ ಮಹಾಲಸ ಕಲ್ಚರಲ್ ಹಾಲ್ನಲ್ಲಿ ನಡೆದ ಪರಿಸರ ರಕ್ಷಿಸಿ-ಜೀವನ ಉಳಿಸಿ ಅಭಿಯಾನ ಮತ್ತು ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಮಾತನಾಡಿ, ಅರಣ್ಯ ಹಾಗೂ ಕೈಗಾರಿಕೆ ಎರಡೂ ಬೇಕು. ಆದರೆ ಜನರ ಜೀವನಕ್ಕೆ ಸಮಸ್ಯೆಯನ್ನು ಉಂಟುಮಾಡುವ ಪ್ರದೇಶದಲ್ಲಿ ಕೈಗಾರಿಕೆ ಮಾಡು ವುದು ಸರಿಯಲ್ಲ ಎಂದು ಹೇಳಿದರು.

ಖಂಬದಕೋಣೆ ಗ್ರಾಪಂ ಅಧ್ಯಕ್ಷ ಸುಕೇಶ ಶೆಟ್ಟಿ ಮಾತನಾಡಿ, ಗ್ರಾಪಂ ಗಮನಕ್ಕೆ ತರದೆ ಅಧಿಕಾರಿಗಳು ಈ ಪ್ರದೇಶವನ್ನು ಕೈಗಾರಿಕೆಗೆ ಕೊಟ್ಟಿದ್ದಾರೆ. ಇದಕ್ಕೆ ಎಲ್ಲ ಸದಸ್ಯರು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಸುವ ಎಲ್ಲ ರೀತಿಯ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.

ಸಮಿತಿ ಉಪಾಧ್ಯಕ್ಷರಾದ ನಿತ್ಯಾನಂದ ಡಿ.ಕೋಟ್ಯಾನ್, ರಾಮಚಂದ್ರ ಬೈಕಂಪಾಡಿ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಉಡುಪಿ ಕ.ರಾ.ವೈ.ಸಂ. ಜಿಲ್ಲಾಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್, ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಮೋಹನದಾಸ್, ಕಿರಿಮಂಜೇಶ್ವರ ಗ್ರಾಪಂ ಮಾಜಿ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಸದಸ್ಯ ಈಶ್ವರ ದೇವಾಡಿಗ, ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ನರಸಿಂಹ ಹಳಗೇರಿ, ನಿವೃತ್ತ ಬ್ಯಾಂಕ್ ಮಾನ್ಯೇಜರ್ ಉದಯ ಕುಮಾರ್ ಶೆಟ್ಟಿ, ಅರಣ್ಯ ಪ್ರದೇಶದಲ್ಲಿ ಕೈಗಾರಿಕಾ ವಲಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು.

ಹಳಗೇರಿ ಪರಿಸರ ಹಿತರಕ್ಷಣಾ ವೇದಿಕೆ ಪ್ರಮುಖ ಹೋರಾಟಗಾರ ನಳೀನ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವನದುರ್ಗ ರೈತಶಕ್ತಿ ಗುಂಪು ಸಂಯೋಜಕ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲಿಯಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News