ಕರ್ಣಾಟಕ ಬ್ಯಾಂಕ್ ನಿರ್ಮಿಸಿ ಕೊಟ್ಟ ಎರಡು ಮನೆಗಳ ಹಸ್ತಾಂತರ
ಉಡುಪಿ : ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಫಲಾನುವಿ ದ್ಯಾರ್ಥಿಗಳಿಗೆ ಮತ್ತು ಕಲಾವಿದರಿಗೆ ಕರ್ಣಾಟಕ ಬ್ಯಾಂಕ್ ಪ್ರಾಯೋಜ ಕತ್ವದಲ್ಲಿ ಉಡುಪಿಯ ನಿಟ್ಟೂರು ಮತ್ತು ಬಡಾನಿಡಿಯೂರಿನಲ್ಲಿ ಒಟ್ಟು ಸುಮಾರು ೧೨ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಎರಡು ಮನೆಗಳನ್ನು ಕರ್ಣಾಟಕ ಬ್ಯಾಂಕ್ನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ.ಎಸ್ ಉದ್ಘಾಟಿಸಿ, ಮನೆಗಳ ಮಾಲಕರಿಗೆ ಹಸ್ತಾಂತರಿಸಿದರು.
ನಿಟ್ಟೂರಿನಲ್ಲಿ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ ಸ್ವಾತಿ (ಪ್ರಥಮ ಪಿಯುಸಿ) ಮತ್ತು ಬಡಾನಿಡಿಯೂರಿನಲ್ಲಿ ಸೌಕೂರು ಮೇಳದ ಯಕ್ಷಗಾನ ಕಲಾವಿದ ಪ್ರವೀಣ್ ಗಾಣಿಗ ಮತ್ತು ಅವರ ಪುತ್ರಿಯರೂ, ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿಯರೂ ಆದ ಪಲ್ಲವಿ (ದ್ವಿತೀಯ ಪಿಯುಸಿ) ಮತ್ತು ಪ್ರಿಯಲಕ್ಷ್ಮೀ (ಪ್ರಥಮ ಪಿಯುಸಿ) ಇವರಿಗೆ ಈ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ.
ಈ ಎರಡೂ ಮನೆಗಳನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಮಹಾಬಲೇಶ್ವರ ಎಂ.ಎಸ್, ಯಕ್ಷಗಾನ ಕಲಾರಂಗ ಸಮಾಜಮುಖಿಯಾಗಿ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದರು. ಕರ್ಣಾಟಕ ಬ್ಯಾಂಕ್ ಇಂತಹ ಕೆಲಸಗಳನ್ನು ನಿರಂತರ ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು.
ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ರಾಜಗೋಪಾಲ ಬಿ. ಮತ್ತು ಹಿರಿಯ ಉದ್ಯಮಿ ಯು. ವಿಶ್ವನಾಥ ಶೆಣೈ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಲಾರಂಗ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಫಲಾನುಭವಿ ಮನೆಗಳ ಬಂಧು ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು. ಇವು ಸಂಸ್ಥೆ ಫಲಾನುಭವಿಗಳಿಗೆ ದಾನಿಗಳ ನೆರವಿನಿಂದ ನಿರ್ಮಿಸಿಕೊಟ್ಟ ೨೫ ಹಾಗೂ ೨೬ನೇ ಮನೆಗಳಾಗಿವೆ.