ಉದ್ದಿಮೆಗಳು ಇಂದಿನ ಅನಿವಾರ್ಯ: ವಿಶಾಲ್ ಹೆಗ್ಡೆ

Update: 2022-04-04 07:33 GMT

ಕಾರ್ಕಳ, ಎ.4: ಉದ್ದಿಮೆಗಳಲ್ಲಿ ಸಾಕಷ್ಟು ಸವಾಲುಗಳು ಒಳಗೊಂಡಿದೆ ಆದರೂ ಇಂದಿನ ಪರಿಸ್ಥಿತಿಯಲ್ಲಿ ದೇಶದ ಹಾಗೂ ಸ್ವ ಅಭಿವೃದ್ಧಿಗೆ ಉದ್ದಿಮೆಗಳು ಅನಿವಾರ್ಯ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸಲರ್ ವಿಶಾಲ್ ಹೆಗ್ಡೆ ಎಂದು ಅಭಿಪ್ರಾಯಿಸಿದ್ದಾರೆ.

ಅವರು ನಿಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ಕೆ. ಉಲ್ಲಾಸ್ ಕಾಮತ್ ಸೆಂಟರ್ ಫಾರ್ ಫ್ಯಾಮಿಲಿ ಮ್ಯಾನೇಜ್ಡ್ ಬ್ಯುಸಿನೆಸ್ ಆಶ್ರಯದಲ್ಲಿ ನಡೆಯುವ 4 ದಿನಗಳ ಕಾರ್ಯಾಗಾರ 'ದಿಶಾ 2022'ನ್ನು ರವಿವಾರ ಉದ್ಘಾಟಿಸಿ ಮಾತನಾಡಿದರು

ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಸಂಪನ್ಮೂಲ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಪರಿಣಿತರು ಸೇರಿ ಕುಟುಂಬ ಯೋಜನೆ ಉದ್ದಿಮೆಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಾಗಿದೆ. ಆದರೆ ಅದು ಅಷ್ಟು ಸುಲಭದ ಮಾತಲ್ಲ ಎಂದರು.

 ಕೆ.ಉಲ್ಲಾಸ್ ಕಾಮತ್ ಸೆಂಟರ್ ಫಾರ್ ಫ್ಯಾಮಿಲಿ ಮ್ಯಾನೇಜ್ಡ್ ಬ್ಯುಸಿನೆಸ್‌ ನ ಮುಖ್ಯಸ್ಥ ಕೆ.ಉಲ್ಲಾಸ್ ಕಾಮತ್ ಮಾತನಾಡಿ, ಅನ್ನದಾನ ಮತ್ತು ವಿದ್ಯಾದಾನ ಎರಡೂ ಬಹು ಪ್ರಾಮುಖ್ಯ ದಾನಗಳು. ಅನ್ನದಾನವು ಮನುಷ್ಯನ ಹೊಟ್ಟೆ ತುಂಬುವುದರೊಂದಿಗೆ ಸಂತೃಪ್ತಿ ನೀಡಿದರೆ, ವಿದ್ಯಾದಾನ ಎಷ್ಟು ಕೊಟ್ಟರೂ ಕಡಿಮೆಯಾಗುವುದಿಲ್ಲ ಬದಲಾಗಿ ಎಷ್ಟು ಕೊಟ್ಟರೂ ಪುನಃ ನಮಗೆ ಹೆಚ್ಚಿನ ಜ್ಞಾನ ಬರುತ್ತದೆ. ನಿಮಗೆ ವ್ಯವಹಾರದ ಬಗ್ಗೆ ಜ್ಞಾನ ಹೆಚ್ಚಾದಂತೆ ನೀವು ವ್ಯವಹಾರ ವ್ಯಾಪಾರದಲ್ಲಿ ಉತ್ಕೃಷ್ಟತೆ ಹೊಂದಲು ಸಾಧ್ಯ. ನನಗೆ ಎಲ್ಲವೂ ತಿಳಿದಿದೆ, ಕಲಿಯಲಿಕ್ಕೆ ಏನೂ ಇಲ್ಲ ಅದರ ಅಗತ್ಯ ನಮಗಿಲ್ಲ ಎಂಬ ಭಂಡ ಜಂಭ ಹಾಗೂ ಅತಿಯಾದ ಆತ್ಮವಿಶ್ವಾಸದಿಂದ ಇಂದು ಉದ್ಯಮ ಗಳು ನೆಲಕಚ್ಚುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ಕಾಲೇಜಿನ ನಿರ್ದೇಶಕ ಡಾ.ಕೆ.ಶಂಕರನ್, ಪ್ರೊ.ಸುಧೀರ್ ರಾಜ್, ಕೆ.ಉಲ್ಲಾಸ್ ಕಾಮತ್ ಸೆಂಟರ್ ಫಾರ್ ಫ್ಯಾಮಿಲಿ ಮ್ಯಾನೇಜ್ಡ್ ಬ್ಯುಸಿನೆಸ್‌ ನ ಲಕ್ಷ್ಮೀ ನಾರಾಯಣ, ಸಿದ್ಧಾರ್ಥ್ ಪೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News