ಸಂತೋಷ್ ಪಾಟೀಲ್ ಜೊತೆ ಇದ್ದ ಇಬ್ಬರು ಸ್ನೇಹಿತರ ವಿಚಾರಣೆ ನಡೆಸಲಾಗುತ್ತಿದೆ : ಉಡುಪಿ ಎಸ್ಪಿ ವಿಷ್ಣುವರ್ಧನ್
ಉಡುಪಿ : ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್ನಲ್ಲಿ ಮೃತಪಟ್ಟಿರುವುದು ಕಂಡುಬಂದಿದ್ದು, ಅವರ ಜೊತೆ ಇದ್ದ ಇಬ್ಬರು ಸ್ನೇಹಿತರವನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.
ಸಂತೋಷ್ ಪಾಟೀಲ್ ಮೃತದೇಹ ಪತ್ತೆಯಾದ ನಗರದ ಶಾಂಭವಿ ಲಾಡ್ಜ್ಗೆ ಆಗಮಿಸಿ ಸುಮಾರು ಮೂರು ತಾಸುಗಳ ಕಾಲ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರಿಗೆ ಈ ಕುರಿತು ಮಾಹಿತಿ ನೀಡಿದರು.
ಮಂಗಳೂರಿನಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಉಡುಪಿಗೆ ಆಗಮಿಸುತ್ತಿದ್ದು, ಮೃತರ ಸಂಬಂಧಿಕರು ಕೂಡ ಇಲ್ಲಿಗೆ ಬರುವುದಾಗಿ ಹೇಳಿದ್ದಾರೆ. ಆ ಬಳಿಕವೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ ಮೃತದೇಹ ಪತ್ತೆಯಾಗಿರುವ ರೂಮನ್ನು ಸೀಲ್ ಮಾಡಲಾಗಿದೆ ಎಂದರು.
ಎಫ್ಎಸ್ಎಲ್ ತಂಡ ಮತ್ತು ಕುಟುಂಬಸ್ಥರು ಬಂದ ನಂತರವೇ ರೂಮ್ ಸೀಲ್ ತೆರೆಯಲಾಗುವುದು. ಎಲ್ಲ ವಿಚಾರಗಳ ಕುರಿತು ತನಿಖಾಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಆತ್ಮಹತ್ಯೆ ಯಾವ ರೀತಿ ಮಾಡಿದರು, ಉಡುಪಿಗೆ ಯಾಕೆ ಬಂದರೂ, ಹೇಗೆ ಆತ್ಮಹತ್ಯೆ ಮಾಡಿಕೊಂಡರೂ ಎಂಬುದರ ಬಗ್ಗೆ ಇನ್ನಷ್ಟೆ ತಿಳಿಯಬೇಕಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಉಡುಪಿಯಲ್ಲೇ ನಡೆಸಲಾಗುವುದು ಎಂದು ಅವರು ತಿಳಿಸಿದರು.