ಉಡುಪಿ: ವಿಕಲಚೇತನರು, ಹಿರಿಯ ನಾಗರಿಕರಿಗೆ 16ರಿಂದ ಪೂರ್ವಭಾವಿ ತಪಾಸಣಾ ಶಿಬಿರ
ಉಡುಪಿ, ಜೂ.15: ಜಿಲ್ಲಾಡಳಿತ, ಜಿಪಂ, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಇಲಾಖೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಅನುಷ್ಠಾನದಲ್ಲಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ವ್ಯಾಪ್ತಿಯ 10 ಸ್ಥಳಗಳಲ್ಲಿ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ವಿತರಿಸಲಾಗುವ ಸಾಧನ ಸಲಕರಣೆಗಳಿಗೆ ಪೂರ್ವಭಾವಿ ತಪಾಸಣಾ ಶಿಬಿರ ಜೂ.16ರಿಂದ 23ರವರೆಗೆ ಬೆಳಗ್ಗೆ 9ರಿಂದ ಸಂಜೆ 4:00ರವರೆಗೆ ನಡೆಯಲಿದೆ.
ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಇವರ ಲೋಕಸಭಾ ಸದಸ್ಯರ ನಿಧಿ ಅನುದಾನದಿಂದ ಕೇಂದ್ರ ಸರಕಾರದ ಎಡಿಐಪಿ ಯೋಜನೆಯಡಿಯಲ್ಲಿ ಗುರುತಿಸಲ್ಪಡುವ ವಿಕಲಚೇತನ ಫಲಾನುಭವಿ ಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಸಾಧನ ಸಲಕರಣೆಗಳಾದ ಗಾಲಿ ಕುರ್ಚಿ, ಶ್ರವಣ ಸಾಧನ, ಕನ್ನಡಕ, ಕೃತಕ ಕಾಲು, ವಾಕರ್, ಊರುಗೋಲು, ವಾಕಿಂಗ್ ಸ್ಟಿಕ್, ಎಲ್.ಎಸ್.ಬೆಲ್ಟ್, ಕೃತಕ ದಂತ, ಬೆನ್ನುಮೂಳೆಗೆ ಸಂಬಂಧ ಪಟ್ಟ ಬೆಲ್ಟ್, ಮೊಣಕಾಲು ಬ್ರೇಸ್ ಇತ್ಯಾದಿಗಳನ್ನು ವಿತರಿಸುವ ಸಲುವಾಗಿ ಈ ಪೂರ್ವಭಾವಿ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರಗಳು ಜೂ.16ರಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರ,17ಕ್ಕೆ ಕುಂದಾಪುರ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, 18ಕ್ಕೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ವಂಡ್ಸೆ, 20ಕ್ಕೆ ನಾವುಂದ ಹಿರಿಯ ಪ್ರಾಥಮಿಕ ಶಾಲೆ, 21ಕ್ಕೆ ಹಾಲಾಡಿ ಕಿರಿಯ ಪ್ರಾಥಮಿಕ ಶಾಲೆ, 22ಕ್ಕೆ ಕಾರ್ಕಳ ತಾಲೂಕು ಆಸ್ಪತ್ರೆ ಹಾಗೂ 23ಕ್ಕೆ ಹೆಬ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ತಪಾಸಣೆ ನಡೆಯಲಿದೆ.
ವಿಕಲಚೇತನ ಫಲಾನುಭವಿಗಳು ಶಿಬಿರಕ್ಕೆ ಅಗತ್ಯ ದಾಖಲೆಗಳೊಂದಿಗೆ ಬರಬೇಕಾಗಿದೆ. ಎರಡು ಪಾಸ್ಪೋರ್ಟ್ ಗಾತ್ರದ ಫೋಟೊ, ಕನಿಷ್ಠ ಶೇ.40ರ ಅಂಗವೈಕಲ್ಯದೊಂದಿಗೆ ಅಂಗವೈಕಲ್ಯ ಕಾರ್ಡ್, ವಿಳಾಸದ ದಾಖಲೆ, ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್ ಹಾಗೂ ಇತರ ದಾಖಲೆ, ಹಿರಿಯ ನಾಗರಿಕರು ಎರಡು ಪೋಟೊ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ನ್ನು ತರಬೇಕು ಎಂದು ರೆಡ್ಕ್ರಾಸ್ನ ಪ್ರಕಟಣೆ ತಿಳಿಸಿದೆ.