ಏಕ ಬಳಕೆ ಪ್ಲಾಸ್ಟಿಕ್ ನಿಷೇಧ; ಎಲ್ಲರಿಗೂ ಸಮಾನ ಕಾಯ್ದೆ: ಲಕ್ಷ್ಮೀಕಾಂತ್

Update: 2022-07-19 15:50 GMT

ಕುಂದಾಪುರ : ಮನುಷ್ಯ ನಿತ್ಯ ಬಳಕೆಯಲ್ಲಿ ೬೪ ರೀತಿಯಾದ ಪ್ಲಾಸ್ಟಿಕ್ ಬಳಸುವ ಮೂಲಕ ಆರೋಗ್ಯದ ಮೇಲೆ ಸವಾಲೊಡ್ಡಿಕೊಳ್ಳುತ್ತಿದ್ದು ಜೀವದ ರಕ್ಷಣೆ ನಿಟ್ಟಿನಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಮಾಡಲು ಇಡೀ ದೇಶಕ್ಕೆ ಅನ್ವಯವಾಗುವಂತೆ ಕಾಯ್ದೆ ರೂಪಿಸಲಾಗಿದೆ. ಇದು ಬೀದಿಬದಿ ವ್ಯಾಪಾರಿ ಗಳಿಂದ ಹಿಡಿದು ಪ್ಲಾಸ್ಟಿಕ್ ಉತ್ಪಾದನೆ ಮಾಡುವವರಿಗೂ ಸಮಾನ ಕಾಯ್ದೆಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ಜಿಲ್ಲಾ ಪರಿಸರ ಅಧಿಕಾರಿ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.

ಕುಂದಾಪುರ ಪುರಸಭೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗ ದೊಂದಿಗೆ ಮಂಗಳವಾರ ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಪುರಸಭಾ ವ್ಯಾಪ್ತಿಯ ವರ್ತಕರು, ಹೋಟೆಲ್ ಮಾಲೀಕರು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಒಂದು ಬಾರಿ ಉಪಯೋಗಿಸಿ ಎಸೆಯುವ ಪ್ಲಾಸ್ಟಿಕ್ ಸ್ವಸ್ಥ ಸಮಾಜದ ಮೇಲೆ ಹಂತಹಂತವಾಗಿ ದುಷ್ಪರಿಣಾಮ ಬೀರುತ್ತಿದೆ. ಮನುಷ್ಯರ ಸಹಿತ, ಜಾನುವಾರು, ಪ್ರಾಣಿ-ಪಕ್ಷಿಗಳು ಈ ತ್ಯಾಜ್ಯ ತಿಂದು ಸಮಸ್ಯೆ ಅನುಭವಿಸುತ್ತಿ ದ್ದಾರೆ. ೨೫ ವರ್ಷಗಳ ಹಿಂದೆ ಪ್ಲಾಸ್ಟಿಕ್ ಬಳಕೆ ಇರಲಿಲ್ಲ. ಕಾಲಘಟ್ಟ ಬದಲಾದಂತೆ ಮನುಷ್ಯ ಇದನ್ನು ನಿತ್ಯ ಜೀವನದಲ್ಲಿ ಬಳಸಲು ಆರಂಭಿಸಿದ್ದು ಅಗತ್ಯಕ್ಕೆ ತಕ್ಕಂತೆ ಉತ್ಪಾದಕರು ಪೂರೈಕೆ ಮಾಡಿದ್ದಾರೆ. ಇದೀಗ ಕಠಿಣ ಕಾನೂನು ಬಂದಿದ್ದು ಕ್ರಮೇಣ ಜನರು ಪ್ಲಾಸ್ಟಿಕ್ ರಹಿತವಾದ ಜೀವನಕ್ಕೆ ಹೊಂದಿಕೊಳ್ಳುತ್ತಾರೆ ಎಂದರು.

ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ೨೦೧೬ರಲ್ಲಿ ಪ್ಲಾಸ್ಟಿಕ್ ನಿಷೇಧ ಕಾಯ್ದೆ ಬಂದಿದ್ದು ಅನುಷ್ಟಾನದ ಬಗ್ಗೆ ಹಲವು ಗೊಂದಲಗಳಾಗಿತ್ತು. ಈಗ ಕೇಂದ್ರ ಸರಕಾರ ಕೂಡ ಈ ಕಾಯ್ದೆ ತಂದಿದ್ದು ರಾಜ್ಯದಲ್ಲಿಯೂ ಕೂಡ ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳಲಿದೆ.  ದಂಡ ಹಾಕುವುದು ಪರಿಹಾರ ವಲ್ಲ.  ಸಾರ್ವಜನಿಕರು, ವರ್ತಕರು ಆದೇಶ ಪಾಲನೆ ಮಾಡಿ ಏಕ ಬಳಕೆ ಪ್ಲಾಸ್ಟಿಕ್ ಬದಲಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಕುಂದಾಪುರ,  ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಶ್ರೀಧರ್ ಶೇರೆಗಾರ್, ನಾಮನಿರ್ದೇಶಿತ ಸದಸ್ಯರಾದ ಪ್ರಕಾಶ್ ಖಾರ್ವಿ, ರತ್ನಾಕರ್ ಉಪಸ್ಥಿತರಿದ್ದರು. ಕುಂದಾಪುರ ಪುರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News