ಬೈಂದೂರು; ಟೋಲ್ ಗೇಟ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಆ್ಯಂಬುಲೆನ್ಸ್: ನಾಲ್ವರು ಮೃತ್ಯು, ಐವರಿಗೆ ಗಾಯ

Update: 2022-07-20 15:33 GMT

ಬೈಂದೂರು: ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ಸಾಗಿಸುತ್ತಿದ್ದ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಶಿರೂರು ಟೋಲ್ ಫ್ಲಾಜಾದಲ್ಲಿ ಢಿಕ್ಕಿ ಹೊಡೆದ ಪರಿಣಾಮ ರೋಗಿ ಸಹಿತ ನಾಲ್ವರು ದಾರುಣವಾಗಿ ಮೃತಪಟ್ಟು, ಐದು ಮಂದಿ ತೀವ್ರ ಗಾಯಗೊಂಡ ಘಟನೆ ಬುಧವಾರ ಸಂಜೆ ಸಂಜೆ 4.10ರ ಸುಮಾರಿಗೆ ನಡೆದಿದೆ.

ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳ ಹಾಡಗೇರಿ ನಿವಾಸಿಗಳಾದ ಲೋಕೇಶ್ ಮಾಧವ ನಾಯ್ಕ (38), ಜ್ಯೋತಿ ಲೋಕೇಶ್ ನಾಯ್ಕ(32), ಗಜಾನನ ಲಕ್ಷ್ಮಣ ನಾಯ್ಕ(36) ಹಾಗೂ ಮಂಜು ನಾಥ ನಾಯ್ಕ (42) ಎಂದು ಗುರುತಿಸಲಾಗಿದೆ.

ಆ್ಯಂಬುಲೆನ್ಸ್ ನಲ್ಲಿದ್ದ ಗೀತಾ ನಾಯ್ಕ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ್ಯಂಬುಲೆನ್ಸ್ ಚಾಲಕ ರೋಶನ್ ರೋಡಿಗ್ರಸ್, ಟೋಲ್ ಸಿಬ್ಬಂದಿ ಸಂಬಾಜಿ ಗೋಲ್ಪಾಡೆ, ಆ್ಯಂಬುಲೆನ್ಸ್ ವಾಹನದಲ್ಲಿದ್ದ ಗಣೇಶ್ ನಾಯ್ಕ, ಶಶಾಂಕ್ ನಾಯ್ಕ ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಜಾನನ ನಾಯ್ಕ ಅವರನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿನ ವೈದ್ಯರ ಸಲಹೆಯಂತೆ ಅವರನ್ನು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಕುಟುಂಬದವರು ಆ್ಯಂಬುಲೆನ್ಸ್ ನಲ್ಲಿ ಕರೆದು ಕೊಂಡು ಬರುತ್ತಿದ್ದರೆನ್ನಲಾಗಿದೆ.

ಶಿರೂರು ಟೋಲ್ ಬಳಿ ಆ್ಯಂಬುಲೆನ್ಸ್ ಅತೀವೇಗದಿಂದ ಆಗಮಿಸುತ್ತಿರುವು ದನ್ನು ಅರಿತ ಟೋಲ್ ಸಿಬ್ಬಂದಿ, ರಸ್ತೆಗೆ ಅಡ್ಡವಿಟ್ಟಿದ್ದ ಫೈಬರ್ ಬ್ಯಾರಿಕೇಡ್ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಕೊಡಲು ಮುಂದಾದರು. ಆಗಲೇ ವೇಗದಿಂದ ಟೋಲ್ ಬಳಿ ಬಂದ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಸುಮಾರು 100 ಮೀಟರ್ ತನಕ ಅಡ್ಡಾದಿಡ್ಡಿ ಚಲಿಸಿ ಟೋಲ್ ಸಂಗ್ರಹ ಕೊಠಡಿ, ಬಳಿಕ ಸಮೀಪದ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಯಿತು.

ಈ ಆ್ಯಂಬುಲೆನ್ಸ್ ಫೈಬರ್ ಬ್ಯಾರಿಗೇಡ್ ತೆಗೆಯಲು ಹೋದ ಟೋಲ್ ಸಿಬ್ಬಂದಿ ಮೇಲೆಯೂ ಬಿತ್ತು. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್ ಹಿಂಭಾಗದ ಬಾಗಿಲು ತೆರೆದುಕೊಂಡಿದ್ದು ಹಿಂಬದಿ ಕುಳಿತವರು ರಸ್ತೆಗೆ ಎಸೆಯಲ್ಪಟ್ಟರು. ಇದರಿಂದ ಗಂಭೀರವಾಗಿ ಗಾಯಗೊಂಡ ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಲೋಕೇಶ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಸಿಸಿಟಿವಿ ಫೂಟೇಜ್‌ನಲ್ಲಿ ಭೀಕರ ದೃಶ್ಯ ಸೆರೆ!

ಚಾಲಕನ ನಿಯಂತ್ರಣ ತಪ್ಪಿ ಆ್ಯಂಬುಲೆನ್ಸ್ ಟೋಲ್ ಗೇಟ್‌ಗೆ ಢಿಕ್ಕಿ ಹೊಡೆಯುವ ಭೀಕರ ದೃಶ್ಯ ಅಲ್ಲಿನ ಸಿಸಿಟಿವಿ ಫೂಟೇಜ್‌ನಲ್ಲಿ ಸೆರೆಯಾಗಿದ್ದು, ಈ ಬೀಭತ್ಸ ದೃಶ್ಯವು ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ಅತೀ ವೇಗದಿಂದ ಬರುವ ಆ್ಯಂಬುಲೆನ್ಸ್, ನಿಯಂತ್ರಣ ಕಳೆದುಕೊಂಡು ಟೋಲ್ ಕೊಠಡಿ ಹಾಗೂ ಕಂಬಕ್ಕೆ ಢಿಕ್ಕಿ ಹೊಡೆಯುವುದು, ಆ್ಯಂಬುಲೆನ್ಸ್ ಬಾಗಿಲು ತೆರೆದು ಎಸೆಯಲ್ಪಡುವ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಕಂಡು ಬಂದಿದೆ. ಅದೇ ರೀತಿ ಅಲ್ಲೇ ಕುಳಿತಿದ್ದ ದನವೊಂದು ಎದ್ದು ಹೋಗುತ್ತಿರುವುದು ಮತ್ತು ಚಾಲಕ ತಕ್ಷಣ ಬ್ರೇಕ್ ಹಾಕಿದ ಪರಿಣಾಮ ಟೋಲ್ ಕೇಂದ್ರ ಬಳಿಯ ಹೆದ್ದಾರಿಯಲ್ಲಿ ನಿಂತ ಮಳೆ ನೀರಿನಿಂದ ಆ್ಯಂಬುಲೆನ್ಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗುತ್ತಿರುವುದು ಸಿಸಿಟಿವಿ ಫುಟೇಜ್‌ನಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ದನ ಮಾತ್ರ ಪವಾಡ ಸದೃಶವಾಗಿ ಪಾರಾಗಿರುವುದು ಸಿಸಿಟಿವಿಯಲ್ಲಿ ಕಾಣಿಸುತ್ತದೆ.

2018ರಲ್ಲೂ ನಡೆದಿತ್ತು ಆ್ಯಂಬುಲೆನ್ಸ್ ಅಪಘಾತ!

ಇದೇ ರೀತಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಆ್ಯಂಬುಲೆನ್ಸ್ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟ ಮಣೂರು ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ೨೦೧೮ರ ಅ.೨೭ರಂದು ಟ್ಯಾಂಕರ್‌ಗೆ ಢಿಕ್ಕಿ ಹೊಡೆದು ರೋಗಿ ಸಹಿತ ಮೂವರು ಮೃತಪಟ್ಟಿದ್ದರು.

ಅಲ್ಲದೆ ಇದರಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದರು. ಮೃತರೆಲ್ಲರು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಿವಾಸಿಗಳಾಗಿದ್ದರು. ಈ ಆ್ಯಂಬುಲೆನ್ಸ್ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಕಾರವಾರದ ಖಾಸಗಿ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News