ಬೈಂದೂರು | ಗದ್ದೆ ಕೆಲಸಕ್ಕೆಂದು ಹೋದ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆ
ಕುಂದಾಪುರ, ಜು.21: ಗದ್ದೆ ಕೆಲಸಕ್ಕೆಂದು ತೋಟದತ್ತ ಹೋದ ಯುವಕನೋರ್ವನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಕೂರ್ಸಿ ಎಂಬಲ್ಲಿಂದ ವರದಿಯಾಗಿದೆ.
ಕೂರ್ಸಿ ನಿವಾಸಿ ಕಾರ್ತಿಕ್ ಆಚಾರ್ (26) ಮೃತ ಯುವಕ.
ಬುಧವಾರ ಮಧ್ಯಾಹ್ನ ಊಟ ಮುಗಿಸಿ ಗದ್ದೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದ ಕಾರ್ತಿಕ್ ವಾಪಸ್ ಮನೆಗೆ ಬಾರದೇ ಇದ್ದುದರಿಂದ ಸಂಜೆಯ ವೇಳೆ ಸಹೋದರರು ಗದ್ದೆ, ತೋಟದ ಬಳಿ ಹೋಗಿ ಹುಡುಕಾಡಿದ್ದಾರೆ. ಈ ವೇಳೆ ಗದ್ದೆಯ ಬಳಿಯಿರುವ ಕೆರೆಯಲ್ಲಿ ಕಾರ್ತಿಕ್ ಅವರ ಚಪ್ಪಲಿ ತೇಲುತ್ತಿತ್ತೆನ್ನಲಾಗಿದೆ. ಅನುಮಾನಗೊಂಡು ಅಗ್ನಿಶಾಮಕ ದಳದವರಿಗೆ ತಿಳಿಸಿದ್ದು, ಅಗ್ನಿಶಾಮಕ ದಳದವರು ಆಗಮಿಸಿ ಕೆರೆಯಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ಕೃಷಿ ಚಟುವಟಿಕೆಗಾಗಿ ಗದ್ದೆ ಕೆಲಸಕ್ಕೆ ಹೋದ ಕಾರ್ತಿಕ್ ಕೆರೆಯ ಬದಿಯಲ್ಲಿರುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ, ಕೆರೆಗೆ ಬಿದ್ದಿರಬಹುದೆಂದು ಕುಟುಂಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.