‘ಜಿಲ್ಲೆಯ ರಚನೆ ಹಿಂದೆ ಜನರ ಬಳಿಗೆ ಸರಕಾರ ತರುವ ಉದ್ದೇಶವಿತ್ತು’

Update: 2022-08-23 14:43 GMT

ಉಡುಪಿ, ಆ.23: ಜನರ ಹತ್ತಿರಕ್ಕೆ ಸರಕಾರವನ್ನು ತರುವ ಮಹತ್ವಾಕಾಂಕ್ಷೆ, 25 ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಯನ್ನು ಪ್ರತ್ಯೇಕಿಸುವ ಸಂದರ್ಭದಲ್ಲಿ ನಮಗಿತ್ತು. ಇದರಲ್ಲಿ ನಾವಿಂದು ಸಾಕಷ್ಟು ಯಶಸ್ವಿಯಾಗಿದ್ದೇವೆ. ಅಭಿವೃದ್ಧಿಯಲ್ಲಿ ಉಡುಪಿ ಜಿಲ್ಲೆ ಇಂದು ರಾಜ್ಯದ ಅಗ್ರಗಣ್ಯ ಜಿಲ್ಲೆಗಳಲ್ಲಿ ಒಂದಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

1997ರ ಆಗಸ್ಟ್ 25ರಂದು ಪ್ರತ್ಯೇಕ ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಇದಕ್ಕೆ ಕಾರಣಕರ್ತರಾಗಿದ್ದ ಅಂದಿನ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಜಯಪ್ರಕಾಶ್ ಹೆಗ್ಡೆ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಉಡುಪಿ ಜಿಲ್ಲಾ ‘ರಜತ ಮಹೋತ್ಸವ’ದ ಸಂದರ್ಭದಲ್ಲಿ ಅಜ್ಜರಕಾಡಿನ ಐಎಂಎ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಹೆಗ್ಡೆ ಅವರೊಂದಿಗಿನ ಸಂವಾದ ಕಾರ್ಯಕ್ರಮ ದಲ್ಲಿ ಮಾತನಾಡುತಿದ್ದರು.

ಪ್ರಾರಂಭದಲ್ಲಿ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕು ಮಾತ್ರವಿದ್ದು, ಇಂದು ಜಿಲ್ಲೆ ಏಳು ತಾಲೂಕುಗಳನ್ನು ಹೊಂದಿದೆ. ಹೀಗಾಗಿ ತಾಲೂಕು ಕೇಂದ್ರಗಳು ಇಂದು ಜನರಿಗೆ ಹೆಚ್ಚು ನಿಕಟವಾಗಿದೆ. ಆದರೆ ಸದ್ಯ ಕುಂದಾಪುರ ಉಪವಿಭಾಗ ಒಂದು ಮಾತ್ರವಿದ್ದು, ಇನ್ನು ಕನಿಷ್ಠ ಎರಡು ಉಪವಿಭಾಗಗಳು ಶೀಘ್ರದಲ್ಲೇ ಆಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಉದ್ಯೋಗಾವಕಾಶ ಕೊರತೆ: ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕದಾಗಿದ್ದರೂ, ಜನಸಂಖ್ಯೆಯಲ್ಲಿ ದೊಡ್ಡದಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಉಡುಪಿ ಈಗಲೂ ರಾಜ್ಯದ ಮುಂಚೂಣಿ ಜಿಲ್ಲೆಯಾಗಿದೆ. ಆದರೆ 25 ವರ್ಷಗಳು ಕಳೆದರೂ ಇಲ್ಲಿನ ಯುವ ಜನಾಂಗಕ್ಕೆ ಉದ್ಯೋಗಾವಕಾಶಗಳು ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ. ಯುವ ಜನಾಂಗವು ಉದ್ಯೋಗವನ್ನು ಅರಸಿ ಪರವೂರು-ವಿದೇಶಗಳಿಗೆ ತೆರಳುವ ಬದಲು ಜಿಲ್ಲೆಯಲ್ಲೇ, ಸ್ವಂತ ಊರಲ್ಲಿಯೇ ಉದ್ಯೋಗ ಪಡೆಯುವಂತಾಗಲು ಪರಿಸರ ಸ್ನೇಹಿ ಸಾಫ್ಟ್‌ವೇರ್ ಉದ್ದಿಮೆಗಳು ಆದ್ಯತೆಯ ನೆಲೆಯಲ್ಲಿ ಸ್ಥಾಪನೆ ಯಾಗ ಬೇಕಾಗಿದೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

ಕರಾವಳಿಯ ಈ ಭಾಗದ ಜನರ ಸತತ  ಪ್ರಯತ್ನ ಹಾಗೂ ಬಾರೀ ನಿರೀಕ್ಷೆಗಳ ನಡುವೆ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್‌ರಿಂದ 1997ರಲ್ಲಿ ಜಿಲ್ಲೆ ಉದ್ಘಾಟನೆಗೊಂಡಾಗ ಜಿಲ್ಲೆಯ ಮೊದಲ ಉಸ್ತುವಾರಿ ಸಚಿವನಾಗಿದ್ದು ನನಗೆ ಹೆಮ್ಮೆಯ  ವಿಷಯ. ಅಂದಿನಿಂದ ಇಂದಿನವರೆಗೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿಪರ ಚಟುವಟಿಕೆಗಳು ನಡೆದಿವೆ. ಮುಂದೆ ಕೂಡ ಅಭಿವೃದ್ಧಿ ಪಥದ ಕೆಲಸ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಪ್ರವಾಸೋದ್ಯಮಕ್ಕೆ ಒತ್ತು ಸಿಗಬೇಕು: ಕರಾವಳಿ ಪ್ರವಾಸೋದ್ಯಮ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು. ಹಾಗೆಯೇ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ  ಆಸ್ಪತ್ರೆ ಹೊಂದಿದ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ. ಅದರ ಜೊತೆಗೆ ಸೆಟಲೈಟ್ ನಗರಗಳಲ್ಲೂ ಸುಸಜ್ಜಿತ ಸರಕಾರಿ ಆಸ್ಪತ್ರೆಗಳನ್ನು ಪ್ರಾರಂಭಿಸುವುದರಿಂದ ಬಡ ವರ್ಗದವರಿಗೆ ಹಾಗೂ ತುರ್ತು ಸಂದರ್ಭಗಳಲ್ಲಿ ಬಹಳ ಅನುಕೂಲವಾಗುತ್ತದೆ ಎಂದರು.

ಜಿಲ್ಲೆಯ ಕೃಷಿ ಅಭಿವೃದ್ಧಿಗೆ ಪೂರಕವಾಗಿ ರಸ್ತೆ, ಸೇತುವೆ, ಕಾಲುಸಂಕ, ವೆಂಟೆಡ್‌ಡ್ಯಾಮ್‌ನಂಥ ಮೂಲಭೂತ ಸೌಕರ್ಯಗಳು ಲಭ್ಯವಾಗಿವೆ. ಹೀಗಾಗಿ ಜನರು ಕೂಡ ಕೃಷಿಗೆ ಹೆಚ್ಚಿನ ಬೆಂಬಲ ನೀಡಬೇಕಾಗಿದೆ. ಜಿಲ್ಲೆಯಲ್ಲಿ ಉಡಾನ್ ಯೋಜನೆಯನ್ನು ಅನುಷ್ಠಾನಗೊಳಿಸಿ ಬೈಂದೂರು ತಾಲೂಕಿನಲ್ಲಿ ವಿಮಾನ ನಿಲ್ದಾಣವನ್ನು ಸಾಕಾರಗೊಂಡರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ದೊರೆಯುವ ನಿರೀಕ್ಷೆ ಇದೆ. ಇದರಿಂದ ಪರಿಸರ ಸಹ್ಯವಾದ ದೊಡ್ಡ ಕೈಗಾರಿಕೆಗಳು, ಸಾಫ್ಟ್‌ವೇರ್ ಉದ್ಯಮಗಳು ಸ್ಥಾಪನೆಗೊಳ್ಳುವ ಅವಕಾಶವೂ ದೊರೆಯುತ್ತದೆ ಎಂದವರು ಅಭಿಪ್ರಾಯಪಟ್ಟರು.

ಪ್ರಥಮ ಜಿಲ್ಲಾಧಿಕಾರಿಗೆ ಹೆಮ್ಮೆ: 1997ರಲ್ಲಿ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಐಎಎಸ್ ಅಧಿಕಾರಿ ಡಾ.ಕಲ್ಪನಾ ಗೋಪಾಲನ್ ಅವರು ವರ್ಚುವಲ್ ಮೂಲಕ ಸಂವಾದದಲ್ಲಿ ಭಾಗವಹಿಸಿ, ತನ್ನ ಅಬಿಪ್ರಾಯವನ್ನು ಹಂಚಿಕೊಂಡರು. 25 ವರ್ಷಗಳ ಬಳಿಕ ಜನರು ಅಧಿಕಾರಿಯೊಬ್ಬರನ್ನು ನೆನಪಿಸಿಕೊಳ್ಳುವ ಮೂಲಕ ತನಗೆ ಅತೀವ ಸಂತೋಷವಾಗಿದೆ. ಐಎಎಸ್ ಅಧಿಕಾರಿಯಾಗಿ ನಾನು ಸಾಕಷ್ಟು ಕಡೆ ಕೆಲಸ ಮಾಡಿರಬಹುದು. ಆದರೆ ಉಡುಪಿಯಲ್ಲಿದ್ದ ಅವಧಿ ನನ್ನ ಹೃದಯದಲ್ಲಿ ಚಿರಹಸಿರಾಗಿದೆ. ಹೊಸ ಜಿಲ್ಲೆಯನ್ನು ವ್ಯವಸ್ಥೆಗೊಳಿಸುವಲ್ಲಿ ಇಲ್ಲಿ ಪಡೆದ ಅನುಭವ ಸದಾ ನೆನಪಿನಲ್ಲಿ ಉಳಿಯುವಂತದ್ದು ಎಂದರು. 

ಹಿಂದಿರುಗಿ ನೋಡಿದಾಗ 25 ವರ್ಷಗಳಲ್ಲಿ ಉಡುಪಿಯ ಸಾಧನೆಯಿಂದ ನನಗೆ ಹೆಮ್ಮೆ ಎನಿಸುತ್ತದೆ. ಉಡುಪಿ ಜನತೆ ಸ್ನೇಹಪರರು ಹಾಗೂ ಸಹೃದಯಿಗಳು. ಪ್ರಥಮ ಜಿಲ್ಲಾಧಿಕಾರಿಯಾಗಿ, ನನ್ನ ಸೇವಾವಧಿಯಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಎಂಬ ಭೇದಲ್ಲದೆ ಒಗ್ಗಟ್ಟಾಗಿ ಜಿಲ್ಲೆಯ ಏಳಿಗೆಗೆ ಶ್ರಮಿಸಿದ್ದೇವೆ ಎಂದರು.

ಪತ್ರಕರ್ತರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಸಂಘದ ರಜತ ಮಹೋತ್ಸವದ ಪ್ರಯುಕ್ತ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಲೋಗೋವನ್ನು  ಅನಾವರಣ ಗೊಳಿಸಲಾಯಿತು. ಜಿಲ್ಲೆ ಪ್ರಾರಂಭಗೊಳ್ಳುವಾಗ 1997ರಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಗುರುತಿಸಿ, ಸನ್ಮಾನಿಸಲಾಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಸಂಘದ ಪದಾಧಿಕಾರಿಗಳಾದ ಪ್ರಮೋದ್ ಸುವರ್ಣ, ಜಯಕರ ಸುವರ್ಣ, ಕಿರಣ್ ಮಂಜನಬೈಲು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಸ್ವಾಗತಿಸಿದರೆ, ಖಜಾಂಚಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ರಹೀಮ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News