ಜಿಟಿಡಿ ನಿವಾಸಕ್ಕೆ ದಿಢೀರ್ ಭೇಟಿ ನೀಡಿದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ

Update: 2022-10-20 13:25 GMT

ಮೈಸೂರು,ಅ.20: ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಗುರುವಾರ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಮನೆಗೆ ದಿಢೀರ್ ಭೇಟಿ ನೀಡಿದರು.

ಮೈಸೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ರಥಯಾತ್ರೆ ಕಾರ್ಯಾಗಾರದಲ್ಲಿ ಪಾಲ್ಗೊಂಡ ಬಳಿಕ ನೇರವಾಗಿ ಒಂಟಿಕೊಪ್ಪಲ್ ನಲ್ಲಿರುವ ಜಿ.ಟಿ.ದೇವೇಗೌಡ ಅವರ ಮನೆಗೆ ಆಗಮಿಸಿದರು.

ಮನೆಗೆ ಆಗಮಿಸಿದ  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಶಾಸಕ ಜಿ.ಟಿ.ದೇವೇಗೌಡ ಕುಟುಂಬ ಸಮೇತರಾಗಿ ಆತ್ಮೀಯವಾಗಿ ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ತೀವ್ರ ಭಾವೋದ್ವೇಗಕ್ಕೆ ಒಳಗಾದ ಶಾಸಕ ಜಿ.ಟಿ.ದೇವೇಗೌಡ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.

ಜಿ.ಟಿ.ದೇವೇಗೌಡರನ್ನು ಪಕ್ಕದಲ್ಲೇ ಕೂರಿಸಿಕೊಂಡು ಮಾಧ್ಯಮಗಳ ಜತೆ ಮಾತನಾಡಿದ ದೇವೇಗೌಡ, ''ಜಿ.ಟಿ.ದೇವೇಗೌಡರನ್ನು ಮರಿ ದೇವೇಗೌಡ ಎಂದು ಕರೆಯುತ್ತೇನೆ. ನಾನು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಸಾ.ರಾ.ಮಹೇಶ್ ಬರುವ ಮೊದಲು ಜಿ.ಟಿ‌.ದೇವೇಗೌಡರು ನಮ್ಮ ಜತೆಯಲ್ಲಿ ಇದ್ದರು. ಜಿ.ಟಿ.ದೇವೇಗೌಡ  ಬೆಳೆಯಲು ಬಿಡಬಾರದು ಎಂದು ಎಂಪಿ ಚುನಾವಣೆಯಲ್ಲಿ ಸೋಲಿಸಿದರು. ಹಾಗೆ ಸೋಲಿಗೆ ಕಾರಣರಾದವರು ಈಗ ನಮ್ಮ ಜತೆಯಲ್ಲಿ ಇಲ್ಲ'' ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸಿದರು.

''ಪಾರ್ಲಿಮೆಂಟ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಎದುರಾಳಿಯನ್ನು ಎದುರಿಸುವ ಶಕ್ತಿ ಇದೆ. ಆ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು'' ಎಂದು ಅವರು ಹೇಳಿದರು.

ಬಳಿಕ ಮಾತನಾಡಿದ ಜಿಟಿ ದೇವೇಗೌಡ, ''ಎಚ್.ಡಿ.ದೇವೇಗೌಡರಿಗೆ  ನನ್ನ ಬಗ್ಗೆ ಪ್ರೀತಿ ಇದೆ. ಮರಿ ದೇವೇಗೌಡ ಎಂದು ನನ್ನನ್ನು ಕರೆಯುತ್ತಿದ್ದರು. ಜಿ.ಟಿ.ದೇವೇಗೌಡ ಪಕ್ಷ ಬಿಟ್ಟು ಹೋಗಲ್ಲ,  ಜೆಡಿಎಸ್ ಪಕ್ಷದಲ್ಲೆ ಇರುತ್ತಾನೆ ಎಂದು ಎಚ್.ಡಿ.ದೇವೇಗೌಡರು  ಹೇಳಿದರು. ಅವರಿಗೆ ನನ್ನ ಮೇಲೆ ಇರುವ ವಿಶ್ವಾಸಕ್ಕೆ ಮನಸ್ಸು ತುಂಬಿ ಬಂದಿದೆ'' ಎಂದರು.

''ಹಿಂದೆ ಹಲವು ಸ್ಥಾನಮಾನವನ್ನು ಮಾಜಿ ಪ್ರಧಾನಿಗಳು ನನಗೆ ನೀಡಿದ್ದರು. ಮೂರು ವರ್ಷ ದೂರ ಇದ್ದರೂ ನನ್ನ ಬಗ್ಗೆ ಅವರಲ್ಲಿನ ಪ್ರೀತಿ ಕಡಿಮೆ ಆಗಿರಲಿಲ್ಲ. ಎಂದೂ ನನ್ನ ಬಗ್ಗೆ ಲಘುವಾಗಿ ಒಂದು ಮಾತನ್ನೂ ಆಡಲಿಲ್ಲ. ಅವರು ಪ್ರಾದೇಶಿಕ ಪಕ್ಷ ಕಟ್ಟಿ ಉಳಿಸಿ ಬೆಳೆಸಿದರು. ಎಚ್.ಡಿ.ದೇವೇಗೌಡರು  ಕಂಡ ಕನಸನ್ನು ನನಸು ಮಾಡುತ್ತೇನೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುತ್ತೇನೆ'' ಎಂದು ಭಾವುಕರಾದ ಜಿಟಿ ದೇವೇಗೌಡರು ಕಣ್ಣೀರಿಟ್ಟರು.

''ದೊಡ್ಡವರು ನನ್ನನ್ನು ಪ್ರೀತಿಯ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ನಾನು ಜೆಡಿಎಸ್ ನಲ್ಲೇ ಉಳಿಯುತ್ತೇನೆ. ಯಾವುದೇ ತ್ಯಾಗ ಮಾಡಲೂ ಸಿದ್ಧನಿದ್ದೇನೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇನೆ. ಅದಕ್ಕಾಗಿಯೇ ದುಡಿಯುತ್ತೇನೆ. ಈಗ ನಮ್ಮಲ್ಲಿ ಯಾವುದೇ ಮುನಿಸು ಇಲ್ಲ, ಒಂದೇ ಒಂದು ದಿನ ಪಕ್ಷಕ್ಕೆ ಕಳಂಕ ಅಥವಾ ಧಕ್ಕೆ ತರುವ ಕೆಲಸ ಮಾಡಿಲ್ಲ'' ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

''ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರುವಂತೆ  ಕರೆದಿದ್ದರು. ಬಿಜೆಪಿಯವರೂ ಕರೆದಿದ್ದಾರೆ. ಆದರೆ ನಾನು ಜೆಡಿಎಸ್ ಬಿಟ್ಟು ಹೋಗಲ್ಲ'' ಎಂದು ಅವರು ಸ್ಪಷ್ಟಪಡಿಸಿದ

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಶಾಸಕರುಗಳಾದ ಸಾ.ರಾ.ಮಹೇಶ್, ಸಿ ಎಸ್ ಪುಟ್ಟರಾಜು  ಸೇರಿದಂತೆ ಪಕ್ಷದ ಶಾಸಕರು, ಮುಖಂಡರು ಹಾಜರಿದ್ದರು. ಜಿಟಿ ದೇವೇಗೌಡರ ಪತ್ನಿ ಲಲಿತಾ ಅವರು, ಅವರ ಪುತ್ರ ಜಿ.ಡಿ. ಹರೀಶ್ ಅವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News