ನ್ಯಾಯ ಒದಗಿಸುವುದು ಸವಾಲಿನ ಕೆಲಸ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-10-22 12:40 GMT

ಚಿತ್ರದುರ್ಗ, ಅ. 22: ‘ಕಾನೂನಿನಲ್ಲಿ ಗೊಂದಲ ಕಡಿಮೆಯಿದ್ದು, ಹೆಚ್ಚು ಸ್ಪಷ್ಟತೆ ಇರುವಂತೆ ಕಾನೂನು ರಚಿಸಬೇಕು. ಇದು ಕಾನೂನು ರೂಪಿಸುವವರ ಜವಾಬ್ದಾರಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ಜಿಲ್ಲಾ ನ್ಯಾಯಾಂಗ ಇಲಾಖೆ ಹಾಗೂ ವಕೀಲ ಸಂಘದ ವತಿಯಿಂದ ಆಯೋಜಿಸಿರುವ ಹೊಸದುರ್ಗ ನ್ಯಾಯಾಲಯದ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ‘ನ್ಯಾಯಾಲಯದ ತೀರ್ಪುಗಳ ಪ್ರಸ್ತುತತೆ ಬಗ್ಗೆ ಅರಿಯುವ ದೃಷ್ಟಿ ನ್ಯಾಯಾಧೀಶರು ಹಾಗೂ ವಕೀಲರಿಗೆ ಇರಬೇಕು. ಅಂತರರಾಜ್ಯ ಜಲವಿವಾದ ಕಾಯ್ದೆಯ ಕಲಂ 3ರಂತೆ ಯಾವುದೇ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದಾದಾಗ ಟ್ರಿಬ್ಯೂನಲ್ ರಚನೆಯಾಗುತ್ತದೆ.

ಟ್ರಿಬ್ಯೂನಲ್ ರಚನೆಯ ನಂತರ ವಿವಾದ ಇತ್ಯರ್ಥಗೊಳ್ಳಲು ದಶಕಗಳೇ ಆಗುತ್ತವೆ. ಕರ್ನಾಟಕದಲ್ಲಿ 2-3 ದಶಕಗಳ ಅವಧಿಯ ಟ್ರಿಬ್ಯೂನಲ್‍ಗಳು ಇವೆ. ಇಲ್ಲಿ ಜಲವಿವಾದಗಳಿಗೆ ಪರಿಹಾರ ದೊರೆಯದೇ ಕಗ್ಗಂಟಾಗಿ ಉಳಿಯುತ್ತದೆ. ಇದರಿಂದ ರಾಜ್ಯಗಳಿಗೆ ಜಲಸಂಪನ್ಮೂಲ ಪೋಲಾಗುತ್ತಿದೆ. ಈ ನಿಟ್ಟಿನಲ್ಲಿ ಬದಲಾವಣೆಗಳಿಗೆ ನಾವು ತೆರೆದುಕೊಳ್ಳದಿದ್ದರೆ ಸರ್ಕಾರ, ನ್ಯಾಯಮೂರ್ತಿಗಳು, ನ್ಯಾಯಾಂಗ ವ್ಯವಸ್ಥೆಗೂ ಕಷ್ಟವಾಗುತ್ತದೆ ಎಂದು ತಿಳಿಸಿದರು.

ನ್ಯಾಯ ಸರಳವಾಗಿ ದೊರೆಯಬೇಕು: ‘ನ್ಯಾಯ ಎನ್ನುವುದು ಸಮಾಜದಲ್ಲಿ ಕಷ್ಟದಿಂದ ಪಡೆಯುವ ಕೆಲಸವಾಗಬಾರದು. ಅದು ಸರಳವಾಗಿ ದೊರೆಯುವಂತಾಗಬೇಕು. ನೂತನ ತಂತ್ರಜ್ಞಾನದಿಂದ ಫಾಸ್ಟ್ ಟ್ರ್ಯಾಕ್ ಕೋರ್ಟ್, ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಆದರೆ ಕಕ್ಷಿದಾರನಿಗೆ ಕಾನೂನು ಮಾರ್ಗದರ್ಶನ ಹಾಗೂ ಸಹಕಾರ ಇನ್ನಷ್ಟು ಸಿಗುವ ಅವಶ್ಯಕತೆ ಇದೆ. ಈ ಹಿಂದೆ, ನ್ಯಾಯಸಮ್ಮತವಾದ ಸಮಾಜವಿದ್ದರೆ ನ್ಯಾಯಾಂಗ ವ್ಯವಸ್ಥೆ ಕಡಿಮೆಯಿದ್ದರೂ ನಡೆಯುತ್ತಿತ್ತು. ಆದರೆ ಈಗ ಅನ್ಯಾಯ ಮಾಡುವುದೇ ಸಹಜವೆಂಬಂತಹ ಪರಿಸ್ಥಿತಿ ಇರುವ ಕಾರಣ, ನ್ಯಾಯಾಂಗ ವ್ಯವಸ್ಥೆ ಮಧ್ಯೆ ಪ್ರವೇಶಿಸುವುದು ಅನಿವಾರ್ಯ ಎಂದರು.

ಶ್ರೇಷ್ಟ ನ್ಯಾಯಾಂಗ ವ್ಯವಸ್ಥೆ: ‘ವ್ಯಾಜ್ಯಗಳೂ ಜಾಸ್ತಿಯಾಗಿದ್ದು, ಜನರು ನ್ಯಾಯ ಪಡೆಯಲು ಹೆಚ್ಚು ಸಮಯ ವ್ಯಯಿಸುತ್ತಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಮಾರಕ. ಪ್ರಜಾಪ್ರಭುತ್ವದ ಪ್ರಮುಖ ಅಂಗ ನ್ಯಾಯಾಂಗ. ದೇಶದಲ್ಲಿನ ಸಾಮಾಜಿಕ ವ್ಯವಸ್ಥೆಯನ್ವಯ ನ್ಯಾಯ ಒದಿಸುವುದು ಸವಾಲಿನ ಕೆಲಸ. ಭಾರತದಲ್ಲಿ ಶ್ರೇಷ್ಟವಾದ ನ್ಯಾಯಾಂಗ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಅಷ್ಟೇ ಮುಖ್ಯ, ಸುಧಾರಣೆ ಅಗತ್ಯವಿದೆ' ಎಂದರು.

ಶತಮಾನೋತ್ಸವ ಆಚರಿಸುವಂತಾಗಲಿ: ‘ಹೊಸದುರ್ಗ ನ್ಯಾಯಾಲಯ 50 ವರ್ಷದ ಸುದೀರ್ಘ ಅವಧಿಯಲ್ಲಿ ಹಲವಾರು ಜನರಿಗೆ ನ್ಯಾಯ ಸಿಕ್ಕಿದೆ. ನ್ಯಾಯ ಹಾಗೂ ಕಾನೂನಿನ ಅರಿವನ್ನು ಮೂಡಿಸಿದೆ. ಜನರಿಗೆ ನ್ಯಾಯ ಒದಗಿಸುತ್ತಾ ಶತಮಾನೋತ್ಸವ ಆಚರಿಸುವಂತಾಗಲಿ' ಎಂದು ಅವರು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿ ಎ.ಎಸ್.ಭೋಪಣ್ಣ, ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಪ್ರಸನ್ನ ಬಿ.ವರ್ಲೇ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ಪಾಟೀಲ್, ವಕೀಲರ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News