ಮೈಸೂರು: ಕೇಂದ್ರ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಅನುಮಾನಾಸ್ಪದ ಸಾವು

Update: 2022-11-05 16:34 GMT

ಮೈಸೂರು,ನ.5: ನಗರದಲ್ಲಿ ಕೇಂದ್ರ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. 

ಆರ್.ಎಸ್.ಕುಲಕರ್ಣಿ 83 ಎಂಬುವರೇ ಮೃತಪಟ್ಟಿರುವ ನಿವೃತ್ತ ಅಧಿಕಾರಿಯಾಗಿದ್ದಾರೆ. 

ನಿನ್ನೆ (ನ.4) ಮೈಸೂರಿನ ಮಾನಸ ಗಂಗೋತ್ರಿ ಆವರಣದ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ  ಅಪಘಾತ ಸಂಭವಿಸಿದೆನ್ನಲಾಗಿದ್ದು,  ತೀವ್ರ ಗಾಯಗೊಂಡ ಕುಲಕರ್ಣಿ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಮೇಲ್ನೋಟಕ್ಕೆ ಇದು ಅಪಘಾತ (ಹಿಟ್ ಅಂಡ್ ರನ್) ಪ್ರಕರಣವೆಂದು ಭಾವಿಸಿದ್ದ ಪೊಲೀಸರು, ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 

''ಪ್ರಕಣರದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದೇವೆ. ಎಸಿಪಿ ನೇತೃತ್ವದಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ತಂಡ ರಚಿಸಲಾಗಿದೆ. ಶೀಘ್ರವೇ ಪ್ರಕರಣ ಬೇಧಿಸಲಿದ್ದೇವೆ. ಕುಲಕರ್ಣಿಯವರು ನಿವೃತ್ತರಾಗಿ 23 ವರ್ಷಗಳಾಗಿವೆ. ಕೊಲೆಗೆ ವೃತ್ತಿ ವೈಷಮ್ಯ ಅಥವಾ ವೈಯಕ್ತಿಕ ವೈಷಮ್ಯ ಕಾರಣವೇ ಎಂದು ಈಗಲೇ ಏನೂ ಹೇಳಲಾಗದು'' ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಈ ಸಂಬಂಧ ಜಯಲಕ್ಷ್ಮಿಪುರಂ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ತನಿಖೆ ಕೈಗೊಂಡಿದ್ದಾರೆ.

Similar News