ಗಡಿ ವಿವಾದ ಮುಗಿದು ಹೋದ ಅಧ್ಯಾಯ, ಪ್ರಧಾನಿ ಮಧ್ಯಪ್ರವೇಶ ಅಗತ್ಯವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2022-11-28 13:19 GMT

ಧಾರವಾಡ, ನ.28: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮುಗಿದು ಹೋದ ಅಧ್ಯಾಯ ಆಗಿದ್ದು, ಎರಡೂ ರಾಜ್ಯದ ನಾಯಕರು ಪ್ರಚೋದಿಸುವ ಹೇಳಿಕೆ ನೀಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿಕೊಂಡಿದ್ದಾರೆ.   

ಸೋಮವಾರ ಧಾರವಾಡ ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಬಿಜೆಪಿ ನಾಯಕರಿಗೂ ಹೇಳುತ್ತೇವೆ ಪ್ರಚೋದನಾತ್ಮಕ ಹೇಳಿಕೆಯಿಂದ ಏನೂ ಆಗುವುದಿಲ್ಲ. ನಾವು - ಚೀನಾ ಪಾಕಿಸ್ತಾನ ಜೊತೆ ಬಡಿದಾಡಬೇಕು. ಅದು ಬಿಟ್ಟು ಕರ್ನಾಟಕ-ಮಹಾರಾಷ್ಟ್ರ ಎಂದು ಹೊಡೆದಾಡುವುದು ಅತ್ಯಂತ ದೌರ್ಭಾಗ್ಯದ ಸಂಗತಿ ಎಂದರು.

ಪ್ರಧಾನಿ ಮಧ್ಯಪ್ರವೇಶಿಸಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿವಾದ ಸುಪ್ರೀಂ ಕೋರ್ಟ್‍ನಲ್ಲಿದೆ. ಮಹಾರಾಷ್ಟ್ರ ಸುಪ್ರೀಂಕೋರ್ಟ್‍ಗೆ ಹೋಗಬಾರದಿತ್ತು. ಯಾರ ಮಧ್ಯಪ್ರವೇಶದ ಅಗತ್ಯ ಇಲ್ಲ. ಕರ್ನಾಟಕದ ಒಂದಿಂಚು ಭೂಮಿಯೂ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ. ಮಹಾರಾಷ್ಟ್ರದ ಒಂದಿಂಚು ಭೂಮಿ ನಮಗೆ ಬರುವುದಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ಬಗ್ಗೆ ಸಿ.ಟಿ.ರವಿ ಹೇಳಿಕೆಯನ್ನು ಸಮರ್ಥಿಸಿದ ಅವರು, ಸಿ.ಟಿ. ರವಿ ಮನೆಗೆ ಕಾಂಗ್ರೆಸ್‍ನವರು ಮುತ್ತಿಗೆ ಹಾಕುತ್ತಾರಂತೆ. ಕಾಂಗ್ರೆಸ್‍ನವರಿಗೂ ಮನೆಗಳಿವೆ, ಅವರ ಮನೆಗಳಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಬಹುದು. ಆದರೆ ಆ ಸಂಸ್ಕೃತಿ ನಮ್ಮದಲ್ಲ. ಹೀಗಾಗಿ ಸಿದ್ದರಾಮಯ್ಯ ಹಾಗೂ ಅವರ ಪಟಾಲಂ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದರು.

Similar News