ಆಡಳಿತ - ವಿಪಕ್ಷ ಸಸ್ಯರ ನಡುವಿನ ಜಟಾಪಟಿಗೆ ಅರ್ಧದಿನದ ಕಲಾಪ ಬಲಿ

Update: 2022-12-21 14:59 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 21: ಗ್ರಾಮೀಣ ಭಾಗದ ಸಾರಿಗೆ ಬಸ್‍ಗಳ ಕೊರತೆ ವಿಚಾರವಾಗಿ ಕಾಂಗ್ರೆಸ್-ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ, ಸಚಿವ ಗೋವಿಂದ ಕಾರಜೋಳ ಹಾಗೂ ಕಾಂಗ್ರೆಸ್ಸಿನ ಡಾ.ಎಚ್.ಡಿ.ರಂಗನಾಥ್ ನಡುವಿನ ಜಟಾಪಟಿಗೆ ಅರ್ಧದಿನದ ಕಲಾಪ ಬಲಿಯಾಯಿತು.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಸಿದ್ಧು ಸವದಿ, ಗ್ರಾಮೀಣ ಪ್ರದೇಶದಲ್ಲಿನ ಸಾರಿಗೆ ಸಮಸ್ಯೆಯನ್ನು ಪ್ರಸ್ತಾಪಿಸಿದ್ದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು. ‘ಧರಣಿ ಕೈಬಿಟ್ಟು ಮೊದಲು ನಿಮ್ಮ ಆಸನಕ್ಕೆ ಹೋಗಿ, ಇದೇನು ನಿಮ್ಮ ವರ್ತನೆ’ ಎಂದು ಕಾರಜೋಳ ಹೇಳಿದ್ದರಿಂದ ಕೆರಳಿದ ಕಾಂಗ್ರೆಸ್ಸಿನ ರಂಗನಾಥ್, ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

‘ಸದನ ನಡೆಸಬೇಕಾದ ಸಚಿವರಈ ರೀತಿಯ ನಡವಳಿಕೆಯೇ?.ಅವರು ಮೊದಲು ಕ್ಷಮಾಪಣೆ ಕೇಳಬೇಕು’ ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದು ಧರಣಿ ನಡೆಸಿದರು.ಇದರಿಂದ ಆಡಳಿತ ಮತ್ತು ವಿಪಕ್ಷ ಸದಸ್ಯರು ಏಕವಚನದಲ್ಲೆ ಪರಸ್ಪರ ನಿಂದಿಸಿಕೊಂಡದ್ದು ನಡೆಯಿತು.ಈ ಗದ್ದಲದಲ್ಲಿ ಯಾರು ಏನು ಮಾತನಾಡುತ್ತಿದ್ದಾರೆಂಬುದೆ ಕೇಳಿಸಲಿಲ್ಲ.

ಈ ವೇಳೆ ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ ಅವರು ಹಲವು ಬಾರಿ ‘ಸದಸ್ಯರು ತಮ್ಮ ಆಸನಗಳಿಗೆ ತೆರಳಬೇಕು’ ಎಂದು ಮಾಡಿದ ಮನವಿಗೂ ಸದಸ್ಯರು ಸ್ಪಂದಿಸದೆ ಮಾತಿನ ಚಕಮಕಿ, ಪರಸ್ಪರ ಪರ-ವಿರೋಧ ಘೋಷಣೆ, ವಾಕ್ಸಮರ ಮುಂದುವರೆಸಿದ್ದರಿಂದ ಸದನವನ್ನು ಎರಡು ಬಾರಿ ಮುಂದೂಡಿಕೆ ಮಾಡಲಾಯಿತು.

ಆರಂಭದಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಶ್ರೀರಾಮುಲು, ‘ವಿಭಾಗವಾರು ಶಾಸಕರ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆ. ಅಲ್ಲದೆ, ಕೋವಿಡ್ ಸಾಂಕ್ರಾಮಿಕಕ್ಕೂ ಮೊದಲುಕಾರ್ಯಾಚರಣೆಯಲ್ಲಿದ್ದು ಸ್ಥಗಿತ ಆಗಿರುವ ಸಾರಿಗೆ ವ್ಯವಸ್ಥೆ ಪುನರ್ ಆರಂಭಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ, ‘ಗ್ರಾಮೀಣ ಪ್ರದೇಶದಲ್ಲಿನ ಸಾರಿಗೆ ಸಮಸ್ಯೆ ಬಗ್ಗೆ ಅರ್ಧ ಗಂಟೆಗೆ ಚರ್ಚೆಗೆ ಅವಕಾಶ ನೀಡುತ್ತೇನೆ’ ಎಂದು ಹೇಳಿದರು.ಇದಕ್ಕೆ ಸ್ಪಂದಿಸಿದ ಧರಣಿನಿರತ ಸದಸ್ಯರು ತಮ್ಮ ಸ್ಥಾನಗಳಿಗೆ ತೆರಳಿದರು.ಆದರೆ ಕಾಂಗ್ರೆಸ್‍ನ ರಂಗನಾಥ್ ಧರಣಿ ಕೈಬಿಡದೆ ಸದನದ ಬಾವಿಯಲ್ಲೇ ಇದ್ದರು.

ಆಗ ಎದ್ದು ನಿಂತ ಸಚಿವರಾದ ಮಾಧುಸ್ವಾಮಿ ಮತ್ತು ಗೋವಿಂದಕಾರಜೋಳ, ‘ಏರಿದ ಧ್ವನಿಯಲ್ಲಿ ‘ಏನಿದು ನೀವು ಬಾವಿಯಿಂದ ಹೊರ ನಡೆಯಿರಿ ಇದೇನು ಹುಡುಗಾಟಿಕೆ ಆಡುತ್ತಿದ್ದೀರಾ?ಎಂದು ರಂಗನಾಥ್ ಅವರನ್ನು ಕೆಣಕಿದರು.

ಇದರಿಂದ ಕೆರಳಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ‘ಏನು ಸದಸ್ಯರ ಜತೆ ಹೀಗೆ ಮಾತಾನಾಡುತ್ತಿರೀ.ಏನೂ ಗೂಂಡಾಗಿರಿ ಮಾಡುವುದು ನೀವು.ನಿಮ್ಮಂತೆಯೆ ಅವರೂ ಜನರಿಂದಲೇ ಆಯ್ಕೆಯಾಗಿ ಬಂದಿದ್ದಾರೆ.ನಿಮ್ಮ ಗೂಂಡಾಗಿರಿ ಸಹಿಸಲು ಸಾಧ್ಯವಿಲ’್ಲ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ತಮ್ಮ ಆಸನಗಳಿಗೆ ಹಿಂದಿರುಗಿದ್ದ ಕಾಂಗ್ರೆಸ್ ಸದಸ್ಯರು ಮರಳಿ ಸ್ಪೀಕರ್ ಪೀಠದ ಮುಂದಿನ ಬಾವಿಗೆ ಬಂದು ಏರಿದ ಧ್ವನಿಯಲ್ಲಿ ‘ಗೂಂಡಾ ಸರಕಾರಕ್ಕೆ ಧಿಕ್ಕಾರ, ಸದನದಲ್ಲಿ ಗೂಂಡಾಗಿರಿ ನಡೆಯುವುದಿಲ್ಲ. ಸಚಿವರು ಕ್ಷಮೆ ಕೇಳಬೇಕು’ ಎಂದು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು.

ಈ ವೇಳೆ ಆಡಳಿತ ಪಕ್ಷದ ಸದಸ್ಯರುಸದನದ ಮುಂದಿನ ಸಾಲಿಗೆ ಧಾವಿಸಿ ಧರಣಿ ನಿರತ ಕಾಂಗ್ರೆಸ್ ಸದಸ್ಯರ ವಿರುದ್ಧ ಪ್ರತಿಯಾಗಿ ಧಿಕ್ಕಾರದ ಘೋಷಣೆ ಕೂಗಿ, ಮಾತಿನ ಚಕಮಕಿಗೆ ಇಳಿದರು.ಆ ಬಳಿಕ ಸದನಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರಕಾರ ಭರವಸೆ ನೀಡಿದ ನಂತರವೂ ಧರಣಿ ಮುಂದುವರಿಸುವುದು ಸಲ್ಲ. ಸದನ ನಡೆಸಲು ಸಹಕರಿಸಿ ಎಂದು ಮನವಿ ಮಾಡಿದರೂ ಅದಕ್ಕೂ ಸ್ಪಂದನೆ ಸಿಗಲಿಲ್ಲ.

ಈ ಹಂತದಲ್ಲಿ ಎದ್ದುನಿಂದ ಮಾಧುಸ್ವಾಮಿ, ನಾನು ಉತ್ತರ ನೀಡುವ ವೇಳೆ ಕಾಂಗ್ರೆಸ್ಸಿನ ಸದಸ್ಯೆ ಅಂಜಲಿ ನಿಂಬಾಳ್ಕರ್ ಅವರು ಆಕ್ಷೇಪಿಸಿದ್ದು, ಮೊದಲು ಅವರನ್ನು ಸದನದಿಂದ ಅಮಾನತ್ತು ಮಾಡಬೇಕೆಂದು ಪಟ್ಟು ಹಿಡಿದಿದ್ದರಿಂದ ಸದನದಲ್ಲಿ ಮತ್ತಷ್ಟು ಕಾವೇರಿತು.ಹೀಗಾಗಿ ಸ್ಪೀಕರ್ ಪೀಠದಲ್ಲಿದ್ದ ಕುಮಾರ ಬಂಗಾರಪ್ಪ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿಕೆ ಮಾಡಿದರು.

‘ಸದನದಲ್ಲಿ ಸಚಿವರು ನಮ್ಮ ಪಕ್ಷದ ಸದಸ್ಯ ರಂಗನಾಥ್ ಜತೆ ನಡೆದುಕೊಂಡು ರೀತಿ ಸರಿಯಿಲ್ಲ. ಅವರು ವಿಷಾದ ವ್ಯಕ್ತಪಡಿಸಬೇಕು.ಒಬ್ಬ ಸದಸ್ಯನಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವುದು ಸದನಕ್ಕೆ ಗೌರವ ತರಲ್ಲ. ಅವರೂ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ .ಎಲ್ಲರಿಗೂ ಗೌರವವಿದೆ.ನಾವು ಧರಣಿ ಹಿಂಪಡೆಯುವುದಿಲ್ಲ’

-ಸಿದ್ದರಾಮಯ್ಯ , ವಿಪಕ್ಷ ನಾಯಕ

------------------------------------------

‘ಈ ವಿಚಾರ ಯಾರೂ ಪ್ರತಿಷ್ಠೆ ಮಾಡಿಕೊಳ್ಳವುದು ಬೇಡ.ಧರಣಿ ಕೈಬಿಡಿ. ಸಾರಿಗೆ ಸಮಸ್ಯೆ ಬಗೆಹರಿಸಲು ಸರಕಾರ ಕ್ರಮ ಕೈಗೊಳ್ಳಲಿದೆ’

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

-------------------------------------

‘ನಾನು ಗಂಭೀರವಾಗಿ ಹೇಳುತ್ತಿದ್ದೇನೆ, ಕಾಂಗ್ರೆಸ್ ಸದಸ್ಯ ಅಂಜಲಿ ನಿಂಬಾಳ್ಕರ್ ಅವರನ್ನು ಕೂಡಲೇ ಸದನದಿಂದ ಹೊರ ಹಾಕಬೇಕು, ಹೊರಗಡೆ ಹಾಕ್ತೀರೋ ಇಲ್ಲವೋ?’

-ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

-----------------------------------------
‘ಸದನದಲ್ಲಿ ಈವರೆಗೆ ಯಾವ ಮಹಿಳಾ ಸದಸ್ಯರು ಅನುಚಿತವಾಗಿ ವರ್ತಿಸಿಲ್ಲ. ಹೀಗೆ ಏಕಾಏಕಿ ಅವರನ್ನು ಅಮಾನತ್ತು ಮಾಡಬೇಕೆಂಬುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ರೀತಿಯಲ್ಲಿ ಸರಿಯಾದ ನಡೆಯಲ್ಲ’

ಆರ್.ವಿ.ದೇಶಪಾಂಡೆ ಕಾಂಗ್ರೆಸ್ ಹಿರಿಯ ಸದಸ್ಯ

Similar News