ಸಾಗರ | ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ: ಇಬ್ಬರು ಯುವಕರು ಮೃತ್ಯು; ಓರ್ವ ಗಂಭೀರ

Update: 2022-12-23 09:57 GMT

ಸಾಗರ, ಡಿ.23: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಢಿಕ್ಕಿ(Accident) ಸಂಭವಿಸಿ ಇಬ್ಬರು ಯುವಕರು ಮೃತಪಟ್ಟ ಘಟನೆ ತಾಲೂಕಿನ ಹೊಸಂತೆ ಗೌತಮಪುರ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.

ಚನ್ನಾಪುರದ ಪ್ರಮೋದ್(23) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗದ ಆಸಿಫ್(21) ಎಂಬವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಪ್ರಮೋದ್ ತನ್ನ ಅಜ್ಜಿ 70 ವರ್ಷದ ದೇವಮ್ಮರನ್ನು ತ್ಯಾಗರ್ತಿಗೆ ಕರೆದುಕೊಂಡು ಹೋಗುತ್ತಿದ್ದರು. ಇವರು ಸಂಚರಿಸುತ್ತಿದ್ದ ಬೈಕ್ ಶಿವಮೊಗ್ಗದಿಂದ ಹೊಸಂತೆಗೆ ಬರುತ್ತಿದ್ದ ಆಸಿಫ್ ಅವರ ಬೈಕ್‍ ಮುಖಾಮುಖಿ ಢಿಕ್ಕಿಯಾಗಿದೆ. ಆಸಿಫ್ ಬೈಕಿನಲ್ಲಿದ್ದ ಶಿವಮೊಗ್ಗದ ತೌಸೀಫ್(20) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

 ದೇವಮ್ಮರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News