ಮೈಸೂರು: ಅಪಹರಣಕ್ಕೊಳಗಾದ ಮಗುವನ್ನು 5 ಗಂಟೆಯಲ್ಲಿ ಪತ್ತೆ ಮಾಡಿ ತಾಯಿಗೊಪ್ಪಿಸಿದ ಪೊಲೀಸರು

Update: 2023-03-18 18:32 GMT

ಮೈಸೂರು: ಮೈಸೂರು ನಗರದ ಚಲುವಾಂಬ ಆಸ್ಪತ್ರೆಯಲ್ಲಿ ಅಪಹರಣಕ್ಕೊಳಗಾದ ಮಗುವನ್ನ ಕೇವಲ 5 ಗಂಟೆಯಲ್ಲಿ ಪತ್ತೆ ಮಾಡಿ ದೇವರಾಜ ಠಾಣೆ ಪೊಲೀಸರು ತಾಯಿಗೊಪ್ಪಿಸಿದ ಘಟನೆ ನಡೆದಿದೆ. ಮಗು ಇಲ್ಲದ ಕಾರಣ ಕಳ್ಳತನ ಮಾಡಿರುವುದಾಗಿ ಆರೋಪಿ ಮಹಿಳೆ ವಿಚಾರಣೆ ವೇಳೆ ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ.

ಚೆಲುವಾಂಬ ಆಸ್ಪತ್ರೆ ಯ ವಾರ್ಡ್ ನಲ್ಲಿ ಸುಶ್ರುಷೆ ಪಡೆಯುತ್ತಿದ್ದ ದಸುಮತಿ ಎಂಬವರ 11 ದಿನದ ಮಗುವನ್ನು ಅಪರಿಚಿತ ಮಹಿಳೆಯೊಬ್ಬರು ಶುಕ್ರವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರಬೇಕು ಎಂದು ಸುಳ್ಳು ಹೇಳಿ ನಂಬಿಸಿ ಮಗುವನ್ನು ಪಡೆದುಕೊಂಡು ಪರಾರಿಯಾಗಿದ್ದಳು ಎಂದು ಆರೋಪಿಸಲಾಗಿದೆ.

ನಂತರ ಮಗುವಿನ ಹೆತ್ತವರು ಹಾಗೂ ಆಸ್ಪತ್ರೆ ಯ ಸಿಬ್ಬಂದಿಗಳು ಮಗುವನ್ನು ಎಲ್ಲ ಕಡೆ ಹುಡುಕಿ ಸಿಗದೇ ಇದ್ದ ಕಾರಣ ದೇವರಾಜ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.

ವಿಷಯ ತಿಳಿದು ತಕ್ಷಣ ಆಸ್ಪತ್ರೆಗೆ ಧಾವಿಸಿದ ಪೊಲೀಸ್ ಇನ್ಸ್ ಪೆಕ್ಟರ್ ಬಿ. ಶಿವಕುಮಾರ್, ಸಬ್ ಇನ್ಸ್ ಪೆಕ್ಟರ್ ಎಂ. ಜೈ ಕೀರ್ತಿ ಹಾಗೂ ಸಿಬ್ಬಂದಿ ಪ್ರವೀಣ್, ಪ್ರದೀಪ್ ಹಾಗೂ ಸುರೇಶ್ ರವರುಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ಆಸ್ಪತ್ರೆ ಯ ಸಿಸಿ ಕ್ಯಾಮರಾ ಪರಿಶೀಲಿಸಿ ಹಾಗೂ ಪ್ರತ್ಯಕ್ಷ ದರ್ಶಿಗಳಿಂದ ಮಾಹಿತಿ ಸಂಗ್ರಹಿಸಿ ಅಪರಿಚಿತ ಮಹಿಳೆ ಹೋಗಿರುವ ದಾರಿಯಲ್ಲಿ ಪರಿಶೀಲನೆ ನಡೆಸಿ ಆಕೆ ಹೋಗಿದ್ದ ಆಟೋ ರಿಕ್ಷಾ ಪತ್ತೆ ಮಾಡಿ ಆಕೆ ಇಳಿದುಕೊಂಡಿದ್ದ ಕುಂಬಾರ ಕೊಪ್ಪಲು ಏರಿಯಾವನ್ನು ಪೂರ್ತಿಯಾಗಿ ಹುಡುಕಾಡಿ ಕೊನೆಗೆ ಆಕೆ ತೆರಳಿದ್ದ ಮನೆಯನ್ನು ಪತ್ತೆ ಮಾಡಿ ಮಗುವನ್ನು ರಕ್ಷಣೆ ಮಾಡಿದ್ದಾರೆ. 

ಪೊಲೀಸರ ಕ್ಷಿಪ್ರ ಕಾರ್ಯಚರಣೆಯನ್ನು ಸಾರ್ವಜನಿಕರು ಶ್ಲಾಘಸಿದ್ದಾರೆ.

ಮಗು ಕಳ್ಳತನ ಮಾಡಿದ್ದ ಅಪರಿಚಿತ ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆಕೆ ತನಗೆ 7 ವರ್ಷದಿಂದ ಮಗುವಿಲ್ಲದೇ ಇದ್ದ ಕಾರಣ ಈ ಕೃತ್ಯ ಮಾಡಿದ್ದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾಳೆ.

ತ್ವರಿತ ಕಾರ್ಯಾಚರಣೆ ಮಾಡಿ ಮಗುವನ್ನು ರಕ್ಷಣೆ ಮಾಡಿ ತಾಯಿಗೊಪ್ಪಿಸಿದ ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಬಿ. ಶಿವಕುಮಾರ್, ಸಬ್ ಇನ್ಸ್ ಪೆಕ್ಟರ್ ಎಂ. ಜೈ ಕೀರ್ತಿ ಹಾಗೂ ಸಿಬ್ಬಂದಿ ಪ್ರವೀಣ್, ಪ್ರದೀಪ್ ಹಾಗೂ ಸುರೇಶ್ ರವರುಗಳ ಕಾರ್ಯ ವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Similar News