ಭೂಕುಸಿತದ ಹಿನ್ನೆಲೆಯಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್: ಸಿಕ್ಕಿಬಿದ್ದ 300ಕ್ಕೂ ಅಧಿಕ ವಾಹನಗಳು
Update: 2023-04-27 06:53 GMT
ಬನಿಹಾಲ್/ಜಮ್ಮು: ರಾಂಬನ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಗುರುವಾರ ಮುಚ್ಚಲಾಗಿದ್ದು, 300 ಕ್ಕೂ ಹೆಚ್ಚು ವಾಹನಗಳು ಸಿಲುಕಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯಿಂದ ಜರ್ಜರಿತವಾಗಿರುವ ಜಿಲ್ಲೆಯ ಶಾಲ್ಗರಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆಯಾದ 270 ಕಿ.ಮೀ. ಹೆದ್ದಾರಿಯ ವಿವಿಧ ಸ್ಥಳಗಳಲ್ಲಿ 300 ಕ್ಕೂ ಹೆಚ್ಚು ವಾಹನಗಳು ಸಿಲುಕಿಕೊಂಡಿವೆ. ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
"ಬನಿಹಾಲ್ ಬಳಿಯ ಶಾಲ್ಗಡಿಯಲ್ಲಿ ನಿರಂತರವಾಗಿ ಬಂಡೆ ಕುಸಿತವಾಗುತ್ತಿರುವ ಕಾರಣ ಸಂಚಾರ ವ್ಯತ್ಯಯವಾಗುತ್ತಿದೆ. ಸಿಕ್ಕಿಬಿದ್ದ ಪ್ರಯಾಣಿಕರಿಗೆ ಆಶ್ರಯ ಶೆಡ್ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ" ಎಂದು ರಾಂಬನ್ ಜಿಲ್ಲಾಧಿಕಾರಿ ಹೇಳಿದ್ದಾರೆ.