ವ್ಯಾಪಕ ಹಿಂಸಾಚಾರ: ನೂರಾರು ಮಂದಿ ಮಣಿಪುರದಿಂದ ಅಸ್ಸಾಮ್ ಗೆ ಪಲಾಯನ

Update: 2023-05-06 15:31 GMT

ಸಿಲ್ಚಾರ್, ಮೇ 6: ಮಣಿಪುರದಲ್ಲಿ ಹಿಂಸೆ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಜಿರಿಬಮ್ ಜಿಲ್ಲೆ ಮತ್ತು ಸುತ್ತಲಿನ ಪ್ರದೇಶಗಳಿಂದ 1,100ಕ್ಕೂ ಅಧಿಕ ಜನರು ಅಂತರ್ರಾಜ್ಯ ಗಡಿ ದಾಟಿ ಅಸ್ಸಾಮ್ ನ ಚಾಚರ್ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ವಲಸಿಗರ ಪೈಕಿ ಹೆಚ್ಚಿನವರು ಕುಕಿ ಸಮುದಾಯದವರು. ಮೇ 4ರ ರಾತ್ರಿ ದುಷ್ಕರ್ಮಿಗಳ ಗುಂಪುಗಳು ಅವರ ಮನೆಗಳ ಮೇಲೆ ದಾಳಿ ನಡೆಸಿದಾಗ ಅವರು ಚಾಚರ್ಗೆ ಪಲಾಯನಗೈದಿದ್ದರು. ತಾವು ಬಿಟ್ಟು ಬಂದಿರುವ ಮನೆಗಳನ್ನು ದುಷ್ಕರ್ಮಿಗಳ ಗುಂಪುಗಳು ನಾಶಪಡಿಸಿರಬಹುದು ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

‘‘ಗುರುವಾರ ರಾತ್ರಿ ಸುಮಾರು 10 ಗಂಟೆಯಾಗಿರಬಹುದು. ಆಗ ನಮ್ಮ ಪ್ರದೇಶದಲ್ಲಿ ಆಕ್ರಂದನಗಳು ಕೇಳಿ ಬಂದವು. ನಮ್ಮ ಮೇಲೆ ದಾಳಿ ನಡೆಯುತ್ತಿದೆ ಎನ್ನುವುದು ನಮಗೆ ಮನವರಿಕೆಯಾಗಲು ಕೆಲವು ನಿಮಿಷಗಳು ಬೇಕಾಯಿತು. ಅವರು ಕಲ್ಲುಗಳನ್ನು ಎಸೆಯುತ್ತಿದ್ದರು ಮತ್ತು ಬೆದರಿಸುತ್ತಿದ್ದರು. ಇದು ನಮ್ಮ ಅಂತಿಮ ಸಮರ ಎಂಬುದಾಗಿ ಅವರು ಹೇಳುತ್ತಿದ್ದರು’’ ಎಂದು ಜಿರಿಬಮ್ ನಿವಾಸಿ 43 ವರ್ಷದ ಎಲ್. ಮುವಾಂಗ್ಪು ಅಸ್ಸಾಮ್ ಗಡಿ ದಾಟಿ ಬಂದ ಬಳಿಕ ಹೇಳಿದರು.

ಮಣಿಪುರದ ಬಹುಸಂಖ್ಯಾತ ಮೇಟಿ ಸಮುದಾಯ ಮತ್ತು ಬುಡಕಟ್ಟು ಸಮುದಾಯಗಳ ನಡುವೆ ಬುಧವಾರ ಹಿಂಸಾತ್ಮಕ ಸಂಘರ್ಷ ಆರಂಭಗೊಂಡಿದೆ ಹಾಗೂ ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ.

ತನಗೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡಬೇಕೆಂದು ಮೇಟಿ ಸಮುದಾಯ ಒತ್ತಾಯಿಸುತ್ತಿದೆ. ಇದನ್ನು ವಿರೋಧಿಸಿ ಬುಡಕಟ್ಟು ಸಮುದಾಯಗಳು ಮಣಿಪುರದ 10 ಬೆಟ್ಟ ಜಿಲ್ಲೆಗಳಲ್ಲಿ ‘ಬುಡಕಟ್ಟು ಏಕತಾ ಯಾತ್ರೆ’ಯನ್ನು ಏರ್ಪಡಿಸಿದ ಬಳಿಕ ರಾಜ್ಯದಲ್ಲಿ ಸಂಘರ್ಷ ನಡೆಯುತ್ತಿದೆ.

ರಾಜ್ಯದ ಜನಸಂಖ್ಯೆಯಲ್ಲಿ ಮೇಟಿ ಸಮುದಾಯದ ಸದಸ್ಯರ ಪ್ರಮಾಣ 53% ಆಗಿದೆ. ಅವರು ಹೆಚ್ಚಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯಗಳು ರಾಜ್ಯದ ಜನಸಂಖ್ಯೆಯ 40%ದಷ್ಟಿವೆ. ಅವುಗಳ ಸದಸ್ಯರು ಹೆಚ್ಚಾಗಿ ಬೆಟ್ಟ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ಜಿರಿಬಮ್ ನಿವಾಸಿ 24 ವರ್ಷದ ವಹ್ಸಿ ಖೊಂಗ್ಸೈ ಎಂಬ ಮಹಿಳೆ ತನ್ನ ಕುಟುಂಬ ಸದಸ್ಯರೊಂದಿಗೆ ಚಾಚರ್ಗೆ ಪಲಾಯನಗೈದಿದ್ದಾರೆ. ‘‘ಗುರುವಾರ ಬೆಳಗ್ಗೆ ನಮ್ಮ ಪ್ರದೇಶದಲ್ಲಿ ಶಾಂತಿ ಸಭೆ ನಡೆಯಿತು. ಪರಸ್ಪರರನ್ನು ರಕ್ಷಿಸುವ ಭರವಸೆಯನ್ನು ಕುಕಿ ಮತ್ತು ಮೇಟಿ ಸಮುದಾಯಗಳೆರಡೂ ನೀಡಿದವು’’ ಎಂದು ಅವರು ಹೇಳಿದರು.

‘‘ನಿರ್ಣಯವೊಂದನ್ನು ಅಂಗೀಕರಿಸಲಾಯಿತು. ಪರಸ್ಪರರನ್ನು ರಕ್ಷಿಸಲು ಉಭಯ ಸಮುದಾಯಗಳು ಒಪ್ಪಿವೆ ಎಂದು ನಾವು ಸಂತೋಷಪಟ್ಟೆವು. ಆದರೆ, ಅದು ನಿಜವಾದ ಒಪ್ಪಂದವಲ್ಲ ಎನ್ನುವುದನ್ನು ಅಂದು ರಾತ್ರಿ ನಮಗೆ ಮನವರಿಕೆಯಾಯಿತು. ಅವರು ಮೊದಲು ಚರ್ಚ್ ಮೇಲೆ ದಾಳಿ ನಡೆಸಿದರು ಹಾಗೂ ನಮ್ಮ ಮನೆಗಳನ್ನು ಸುಡಲು ಪ್ರಯತ್ನಿಸಿದರು. ನಮ್ಮ ಪ್ರದೇಶದಲ್ಲಿರುವ ಪುರುಷರು ತಮ್ಮ ಪ್ರಾಣದ ಹಂಗು ತೊರೆದು ನಮ್ಮನ್ನು ರಕ್ಷಿಸಿದರು’’ ಎಂದರು.

ಸೇನೆ ಗುರುವಾರ ರಾತ್ರಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು ಎಂದು ಕೊಂಗ್ಸೈ ಹೇಳಿದರು. ಅದರೂ, ಸ್ವಲ್ಪ ಸಮಯದವರೆಗಾದರೂ ಮನೆಗಳನ್ನು ತೊರೆಯಲು ನಾವು ನಿರ್ಧರಿಸಿದೆವು ಎಂದರು.

‘‘ಸೇನೆ ಇರುವವರೆಗೆ ನಾವು ಸುರಕ್ಷಿತ. ಆದರೆ, ಅವರು ನಮ್ಮನ್ನು ಯಾವಾಗಲೂ ರಕ್ಷಿಸಲು ಸಾಧ್ಯವಿಲ್ಲ. ಅಸ್ಸಾಮ್ ಗಡಿಯವರೆಗೆ ನಡೆದುಕೊಂಡು ಹೋಗಲು ಅಂದು ಮಧ್ಯರಾತ್ರಿ ನಾವು ನಿರ್ಧರಿಸಿದೆವು. ನಾವು ಮಕ್ಕಳು ಮತ್ತು ಹಿರಿಯರೊಂದಿಗೆ ಜಿರಿ ನದಿಯನ್ನು ದಾಟಿದೆವು’’ ಎಂದು ಅವರು ಹೇಳಿದರು.

Similar News